ADVERTISEMENT

ಬಾಂಗ್ಲಾವು ದಂಗೆಕೋರರಿಗೆ ಮತ್ತೊಮ್ಮೆ ‘ಸ್ವರ್ಗ’ವಾಗಬಾರದು: ಹಿಮಂತ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2024, 16:08 IST
Last Updated 7 ಆಗಸ್ಟ್ 2024, 16:08 IST
ಹಿಮಂತ ಬಿಸ್ವಾ ಶರ್ಮಾ
ಹಿಮಂತ ಬಿಸ್ವಾ ಶರ್ಮಾ   

ಗುವಾಹಟಿ: ‘ದಂಗೆಕೋರರಿಗೆ ಬಾಂಗ್ಲಾದೇಶವು ‘ಸ್ವರ್ಗ’ ಎಂಬಂತೆ ಮತ್ತೊಮ್ಮೆ ಆಗಬಾರದು. ಶೇಕ್‌ ಹಸೀನಾ ಅವರು ಪ್ರಧಾನಿ ಆಗುವುದಕ್ಕೂ ಮೊದಲು ಬಾಂಗ್ಲಾದೇಶವು ದಂಗೆಕೋರರಿಗೆ ಸುರಕ್ಷಿತ ನೆಲೆ ಎಂಬಂತಿತ್ತು’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಬುಧವಾರ ಅಭಿಪ್ರಾಯಪಟ್ಟರು. ಆ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದರು.

‘2041ರ ಹೊತ್ತಿಗೆ ರಾಜ್ಯದಲ್ಲಿ ಮುಸ್ಲೀಮರು ಬಹುಸಂಖ್ಯಾತರಾದರೆ, ರಾಜ್ಯ ಪರಿಸ್ಥಿತಿ ಏನಾಗಬಹುದು. ಆ ದೇಶದ ಪರಿಸ್ಥಿತಿಯು ಭಾರತದ ಪೂರ್ವ ಭಾಗದ ರಾಜ್ಯಗಳಿಗೆ ಕಳವಳಕಾರಿಯಾಗಲಿದೆ’ ಎಂದರು.

‘ಬಾಂಗ್ಲಾದೇಶದ ಪರಿಸ್ಥಿತಿಯು ಎರಡು ಕಾರಣಗಳಿಂದಾಗಿ ಕಳವಳಕಾರಿಯಾಗಿದೆ. ಒಂದು: ಆ ದೇಶದ ಜನರು ಭಾರತದ ಒಳಗೆ ನುಸುಳುವ ಸಾಧ್ಯತೆಯು ಹೆಚ್ಚುತ್ತದೆ. ಇದಕ್ಕಾಗಿ ನಮ್ಮ ಗಡಿಗಳಲ್ಲಿನ ಭದ್ರತೆಯನ್ನು ಹೆಚ್ಚಿಸಬೇಕಾಗುತ್ತದೆ. ಎರಡನೇದು: ಬಾಂಗ್ಲಾದೇಶದ ಮೂಲಕವಾಗಿ ಈಶಾನ್ಯ ರಾಜ್ಯಗಳನ್ನು ಪ್ರವೇಶಿಸುವುದಕ್ಕೆ ಆ ದೇಶವು ಅನುವು ಮಾಡಿಕೊಡಬಾರದು. ನುಸುಳುಕೋರರಿಗೆ ಅದು ಸ್ವರ್ಗವಾಗಬಾರದು. ಹಸೀನಾ ಅವರ ಅವಧಿಯಲ್ಲಿ ನಮ್ಮ ರಾಜ್ಯಗಳಲ್ಲಿ ಶಾಂತಿ ನೆಲಸಿತ್ತು’ ಎಂದು ಹಿಮಂತ ಹೇಳಿದರು.

ADVERTISEMENT
ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಹೊಸ ಸರ್ಕಾರದೊಂದಿಗೆ ಈಶಾನ್ಯ ರಾಜ್ಯಗಳ ಕುರಿತು ಮಾತುಕತೆ ನಡೆಸಲಿದ್ದಾರೆ ಎಂಬ ಭರವಸೆ ಇದೆ
-ಹಿಮಂತ ಬಿಸ್ವಾ ಶರ್ಮಾ ಅಸ್ಸಾಂ ಮುಖ್ಯಮಂತ್ರಿ

* ಬಿಎಸ್‌ಎಫ್‌ ಮಹಾನಿರ್ದೇಶಕ ದಲ್‌ಜೀತ್‌ ಸಿಂಗ್‌ ಚೌಧರಿ ಅವರು ಬುಧವಾರ ತ್ರಿಪುರಾಕ್ಕೆ ಭೇಟಿ ನೀಡಿ ಭಾರತ–ಬಾಂಗ್ಲಾ ಗಡಿಯಲ್ಲಿನ ಸ್ಥಿತಿಗತಿಗಳನ್ನು ಹಾಗೂ ತುರ್ತಿನ ಸಮಯದಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಕುರಿತ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದರು

* ಕಳೆದ 24 ಗಂಟೆಗಳಲ್ಲಿ 11 ಮಂದಿ ಬಾಂಗ್ಲಾದೇಶೀಯರನ್ನು ತ್ರಿಪುರಾದಲ್ಲಿ ಬಂಧಿಸಲಾಗಿದೆ. ಇವರಿಂದ ₹50 ಲಕ್ಷ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರೆಲ್ಲರೂ ಬಾಂಗ್ಲಾದೇಶಕ್ಕೆ ಮರಳುವ ತಯಾರಿಯಲ್ಲಿದ್ದರು ಎನ್ನಲಾಗಿದೆ. ಇವರು ಮಾದಕವಸ್ತು ಕಳ್ಳಸಾಗಣೆದಾರರು ಎಂದು ಶಂಕಿಸಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.