ADVERTISEMENT

ಲೈಂಗಿಕ ಕಿರುಕುಳ ಆರೋಪ | ಪೊಲೀಸರ ಸಮನ್ಸ್‌ ನಿರ್ಲಕ್ಷಿಸಿ: ರಾಜ್ಯಪಾಲ ಬೋಸ್‌ ಸೂಚನೆ

ಪಿಟಿಐ
Published 5 ಮೇ 2024, 15:45 IST
Last Updated 5 ಮೇ 2024, 15:45 IST
ಸಿ.ವಿ. ಆನಂದ ಬೋಸ್‌
ಸಿ.ವಿ. ಆನಂದ ಬೋಸ್‌   

ಕೋಲ್ಕತ್ತ: ಮಹಿಳಾ ನೌಕರರೊಬ್ಬರು ದಾಖಲಿಸಿರುವ ಲೈಂಗಿಕ ಕಿರುಕುಳ ದೂರಿಗೆ ಸಂಬಂಧಿಸಿದಂತೆ ಕೋಲ್ಕತ್ತ ಪೊಲೀಸರಿಂದ ಯಾವುದೇ ಸಮನ್ಸ್‌ ಬಂದರೂ ನಿರ್ಲಕ್ಷಿಸುವಂತೆ ರಾಜಭವನದ ಸಿಬ್ಬಂದಿಗೆ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್‌ ಭಾನುವಾರ ಸೂಚನೆ ನೀಡಿದ್ದಾರೆ.

ರಾಜ್ಯಪಾಲರ ವಿರುದ್ಧ ಮಹಿಳೆ ಮಾಡಿರುವ ಆರೋಪದ ಬಗ್ಗೆ ತನಿಖೆ ನಡೆಸಲು ಕೋಲ್ಕತ್ತ ಪೊಲೀಸರು ತನಿಖಾ ತಂಡ ರಚಿಸಿದ ಬೆನ್ನಲ್ಲೇ ರಾಜ್ಯಪಾಲರಿಂದ ಈ ಕುರಿತು ನಿರ್ದೇಶನ ಬಂದಿದೆ.

ಭಾರತ ಸಂವಿಧಾನದ 361(2) ಮತ್ತು (3)ನೇ ವಿಧಿಯು, ರಾಜ್ಯಪಾಲರ ವಿರುದ್ಧ ಪೊಲೀಸರು ವಿಚಾರಣೆ ಅಥವಾ ತನಿಖಾ ಪ್ರಕ್ರಿಯೆಗಳನ್ನು ನಡೆಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ ಎಂದು ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ADVERTISEMENT

ಅಲ್ಲದೆ ರಾಷ್ಟ್ರಪತಿ ಅಥವಾ ರಾಜ್ಯಪಾಲರು ಅಧಿಕಾರದಲ್ಲಿ ಇರುವಾಗ ಅವರ ವಿರುದ್ಧ ಯಾವುದೇ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತಿಲ್ಲ. ಹಾಗೆಯೇ ಅವರು ಅಧಿಕಾರದಲ್ಲಿರುವಾಗ ಯಾವುದೇ ನ್ಯಾಯಾಲಯವು ಅವರ ವಿರುದ್ಧ ಬಂಧನ ಅಥವಾ ಜೈಲಿಗೆ ಕಳುಹಿಸಲು ಕ್ರಮ ತೆಗೆದುಕೊಳ್ಳುವಂತಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಪೊಲೀಸರು ರಾಜಭವನದ ಸಿಬ್ಬಂದಿಯನ್ನು ಪ್ರಶ್ನಿಸಲಿದ್ದಾರೆ ಮತ್ತು ತನಿಖಾ ತಂಡವು ರಾಜಭವನದಿಂದ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಸಂಗ್ರಹಿಸಲು ಉದ್ದೇಶಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ರಾಜ್ಯಪಾಲರಿಗೆ ಇರುವ ವಿನಾಯಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಪೊಲೀಸರು ವಿಚಾರಣೆ ನಡೆಸಿ, ಸಾಕ್ಷ್ಯಗಳನ್ನು ಸಂಗ್ರಹಿಸಬಹುದೇ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.