ADVERTISEMENT

ಸಂವಿಧಾನ ಉಲ್ಲಂಘಿಸಿದ ಸ್ಪೀಕರ್‌: ರಾಜ್ಯಪಾಲರ ದೂರು

ರಾಜ್ಯಪಾಲರ ನಿರ್ದೇಶನದ ಹೊರತಾಗಿಯೂ ನೂತನ ಶಾಸಕರಿಗೆ ಪ್ರಮಾಣವಚನ ಬೋಧನೆ

ಪಿಟಿಐ
Published 5 ಜುಲೈ 2024, 15:54 IST
Last Updated 5 ಜುಲೈ 2024, 15:54 IST
ರಾಜ್ಯಪಾಲ ಸಿ.ವಿ. ಆನಂದ್‌ ಬೋಸ್‌
ರಾಜ್ಯಪಾಲ ಸಿ.ವಿ. ಆನಂದ್‌ ಬೋಸ್‌   

ಕೋಲ್ಕತ್ತ: ತೃಣಮೂಲ ಕಾಂಗ್ರೆಸ್‌ ಪಕ್ಷದ ಇಬ್ಬರು ಶಾಸಕರಿಗೆ ಸ್ಪೀಕರ್‌ ಪ್ರಮಾಣವಚನ ಬೋಧಿಸುವ ಮೂಲಕ ‘ಸಂವಿಧಾನದ ಉಲ್ಲಂಘನೆಯಾಗಿದೆ’ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದ್‌ ಬೋಸ್‌ ಅವರು ಶುಕ್ರವಾರ ರಾಷ್ಟ್ರಪತಿ ದ್ರೌಪ‍ದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ ಎಂದು ರಾಜ್ಯಭವನದ ಮೂಲಗಳು ತಿಳಿಸಿವೆ.

ಈ ಕೆಲಸ ನಿರ್ವಹಿಸುವಂತೆ ರಾಜ್ಯ‌ಪಾಲ ಬೋಸ್‌ ಅವರು ಡೆಪ್ಯುಟಿ ಸ್ಪೀಕರ್‌ಗೆ ತಿಳಿಸಿದ್ದರು. ಇದರ ಹೊರತಾಗಿಯೂ, ಸ್ಪೀಕರ್‌ ಬಿಮನ್‌ ಬ್ಯಾನರ್ಜಿ ಅವರು ಇಬ್ಬರು ಶಾಸಕರಿಗೆ ಪ್ರಮಾಣವಚನ ಬೋಧಿಸಿದ ಬಳಿಕ ರಾಜ್ಯಪಾಲರು ಈ ಪತ್ರ ಬರೆದಿದ್ದಾರೆ.

‘ಸಂವಿಧಾನ ಗೌರವಿಸುವಲ್ಲಿ ಸ್ಪೀಕರ್‌ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ವಿಧಾನಸಭೆಯ ಇಬ್ಬರು ಶಾಸಕರಿಗೆ ಪ್ರಮಾಣವಚನ ಬೋಧಿಸುವ ಮೂಲಕ ಸಂವಿಧಾನವನ್ನು ಉಲ್ಲಂಘಿಸಿದ್ದಾರೆ’ ಎಂದು ರಾಜ್ಯಭವನದ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ರಾಜ್ಯಭವನ– ವಿಧಾನಸಭೆ ನಡುವಿನ ಒಂದು ತಿಂಗಳ ಕಾಲ ಬಿಕ್ಕಟ್ಟಿನ ನಂತರ, ಮುರ್ಷಿದಾಬಾದ್‌ ಜಿಲ್ಲೆಯ ಭಾಗಬಂಗೋಲಾ ಶಾಸಕ ರಾಯತ್‌ ಹೊಸೈನ್‌ ಸರ್ಕಾರ್‌, ಕೋಲ್ಕತ್ತ ಹೊರವಲಯದ ಬಾರಾನಗರ ಕ್ಷೇತ್ರದ ಶಾಸಕಿ ಸಯಾಂತಿಕಾ ಬ್ಯಾನರ್ಜಿ ಅವರು ಶುಕ್ರವಾರ ನಡೆದ ವಿಶೇಷ ಅಧಿವೇಶನದಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ರಾಜ್ಯಪಾಲ ಸಿ.ವಿ. ಆನಂದ ಬೋಸ್‌ ಅವರು ರಾಜಭವನಕ್ಕೆ ಬಂದು ಪ್ರಮಾಣ ವಚನ ಸ್ವೀಕರಿಸುವಂತೆ ಇಬ್ಬರು ಶಾಸಕರಿಗೆ ಆಹ್ವಾನ ನೀಡಿದ್ದರು. ಇದನ್ನು ಇಬ್ಬರು ಶಾಸಕರು ತಿರಸ್ಕರಿಸಿ, ಪ್ರತಿಭಟನೆ ನಡೆಸಿದ್ದರು. ಇದಾದ ಬಳಿಕ ಈ ಜವಾಬ್ದಾರಿಯನ್ನು ರಾಜ್ಯಪಾಲರು ಡೆಪ್ಯುಟಿ ಸ್ಪೀಕರ್‌ಗೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.