ಗುವಾಹತಿ: ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ನಾಲ್ಕು ಮಂದಿ ನಾಗರಿಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಕುಕಿ ಬಂಡುಕೋರ ಗುಂಪಿಗೆ ಸೇರಿದ್ದಾನೆ ಎನ್ನಲಾದ ವ್ಯಕ್ತಿಯೊಬ್ಬನನ್ನು ಬಂಧಿಸಿದೆ.
ಕಳೆದ ವರ್ಷದ ಜನವರಿಯಲ್ಲಿ ಈ ಹತ್ಯೆ ನಡೆದಿತ್ತು. ಬಿಷ್ಣುಪುರ ಜಿಲ್ಲೆಯಲ್ಲಿ ಮೈತೇಯಿ ಸಮುದಾಯದವರು ಪ್ರಾಬಲ್ಯ ಹೊಂದಿದ್ದಾರೆ.
ಆರೋಪಿಯ ಹೆಸರು ಲುನ್ಮಿನ್ಸೆ ಕಿಪ್ಜೆನ್ ಎಂದು ಎನ್ಐಎ ಪ್ರಕಟಣೆ ತಿಳಿಸಿದೆ. ಇವನನ್ನು ಗುವಾಹತಿಯ ಕೇಂದ್ರ ಕಾರಾಗೃಹದಲ್ಲಿ ಶನಿವಾರ ಬಂಧಿಸಲಾಗಿದೆ. ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಈತ ಜೈಲುಪಾಲಾಗಿದ್ದ.
2023ರ ಜನವರಿ 18ರಂದು ನಡೆದ ಹತ್ಯೆಗೆ ಸಂಬಂಧಿಸಿದಂತೆ ಆಗಿರುವ ಮೊದಲ ಬಂಧನ ಇದು ಎಂದು ಎನ್ಐಎ ಹೇಳಿದೆ. ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷದ ಭಾಗವಾಗಿ ಈ ಹತ್ಯೆ ನಡೆದಿದೆ ಎಂದು ಎನ್ಐಎ ಹೇಳಿದೆ. ಈ ಸಂಘರ್ಷದಲ್ಲಿ ಕಳೆದ ವರ್ಷದ ಮೇ ತಿಂಗಳಿನಿಂದ ಈಚೆಗೆ 225 ಮಂದಿ ಹತ್ಯೆಯಾಗಿದ್ದಾರೆ.
‘ಕಿಪ್ಜೆನ್ ಈ ನಾಲ್ವರ ಹತ್ಯೆಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾನೆ. ಈತ ಮೊದಲು ಕುಕಿ ಉಗ್ರ ಸಂಘಟನೆ ಕೆಎನ್ಎಫ್ನ ಸದಸ್ಯನಾಗಿದ್ದ. ನಂತರ ಈತ ಯುನೈಟೆಡ್ ಕುಕಿ ನ್ಯಾಷನಲ್ ಆರ್ಮಿ ಎಂಬ ಸಂಘಟನೆ ಸೇರಿದ್ದ’ ಎಂದು ಎನ್ಐಎ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.