ADVERTISEMENT

ಪ್ರಿಯಾಂಕಾ ವಯನಾಡ್ ಸ್ಪರ್ಧೆ; ಕ್ಷೇತ್ರದ ಜನರಿಗೆ ಕಾಂಗ್ರೆಸ್ ವಂಚನೆ– ಬಿಜೆಪಿ ಆರೋಪ

ಪಿಟಿಐ
Published 18 ಜೂನ್ 2024, 9:59 IST
Last Updated 18 ಜೂನ್ 2024, 9:59 IST
<div class="paragraphs"><p>ಕೆ.ಸುರೇಂದ್ರನ್ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ</p></div>

ಕೆ.ಸುರೇಂದ್ರನ್ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ

   

ತಿರುವನಂತಪುರ: ಸಂಸದ ರಾಹುಲ್ ಗಾಂಧಿ ಅವರಿಂದ ತೆರವಾಗುವ ಕೇರಳದ ವಯನಾಡ್‌ ಕ್ಷೇತ್ರಕ್ಕೆ ಪ್ರಿಯಾಂಕಾ ಗಾಂಧಿಯನ್ನು ಕಣಕ್ಕಿಳಿಸುವ ಕಾಂಗ್ರೆಸ್‌ ನಿರ್ಧಾರವನ್ನು ಬಿಜೆಪಿ ಟೀಕಿಸಿದೆ. ಇದು ವಯನಾಡ್ ಕ್ಷೇತ್ರದ ಮತದಾರರಿಗೆ ಕಾಂಗ್ರೆಸ್ ಮಾಡಿರುವ ದ್ರೋಹ ಎಂದಿದೆ.

ಈ ಕುರಿತು ಮಾತನಾಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್, ‘ಕುಟುಂಬದ ಹಿತ ಕಾಯುವ ಸಲುವಾಗಿ ರಾಜಕೀಯದಲ್ಲಿರುವ ನೆಹರು–ಗಾಂಧಿ ಕುಟುಂಬದ ಅಸ್ತ್ರ ಇದುವೇ ಎಂಬುದು ಮತ್ತೊಮ್ಮೆ ಸಾಬೀತಾಗಿದೆ’ ಎಂದಿದ್ದಾರೆ.

ADVERTISEMENT

ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಈ ಕುರಿತು ವಿಷಯ ಹಂಚಿಕೊಂಡಿರುವ ಅವರು, ‘ವಯನಾಡ್‌ನಿಂದ ತಂಗಿ ಪ್ರಿಯಾಂಕಾ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿರುವ ರಾಹುಲ್‌ ಅವರು, ಪಾಲಕ್ಕಾಡ್‌ ಉಪಚುನಾವಣೆಗೆ ತಮ್ಮ ಬಾವ ರಾಬರ್ಟ್ ವಾದ್ರಾ ಅವರನ್ನು ಕಣಕ್ಕಿಳಿಸಬಹುದು. ಇವರ ಈ ನಿರ್ಧಾರದಿಂದ ರಾಹುಲ್ ಅವರಿಗೆ ಅವರ ಪರಿವಾರದ ಕುರಿತು ಇರುವ ಕಾಳಜಿ ಬಹಿರಂಗಗೊಂಡಿದೆ’ ಎಂದಿದ್ದಾರೆ.

ಇದೇ ವಿಷಯವಾಗಿ ಮಾತನಾಡಿರುವ ಬಿಜೆಪಿ ಮುಖಂಡ ಮುರಳೀಧರನ್‌, ‘ಕಾಂಗ್ರೆಸ್‌ನ ಈ ನಡೆಯನ್ನು ಕೇರಳದ ಜನ ಖಂಡಿತವಾಗಿಯೂ ಸಹಿಸುವುದಿಲ್ಲ. ಹಾಗೆಯೇ ಇವರ ಪರವಾಗಿ ಯಾವುದೇ ರೀತಿಯ ಪ್ರಜಾಸತ್ತಾತ್ಮಕ ನಿಲುವು ಅಥವಾ ನ್ಯಾಯ ತೋರುವ ಅಗತ್ಯವಿಲ್ಲ. ರಾಯ್‌ಬರೇಲಿಯಲ್ಲಿ ಸ್ಪರ್ಧಿಸುವ ಯೋಜನೆ ಇದ್ದರೂ, ವಯನಾಡ್ ಚುನಾವಣೆ ಪೂರ್ಣವಾಗುವವರೆಗೂ ಅದನ್ನು ಮರೆಮಾಚುವ ಮೂಲಕ ಕ್ಷೇತ್ರದ ಜನರನ್ನು ವಂಚಿಸಿದ್ದಾರೆ. ಇದಕ್ಕೆ ತಕ್ಕ ಕ್ಷೇತ್ರದ ಜನರು ತಕ್ಕ ಪಾಠ ಕಲಿಸಬೇಕಿದೆ’ ಎಂದಿದ್ದಾರೆ.

ಇವರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ವಿ.ಡಿ.ಸತೀಶನ್, ‘ಪ್ರಿಯಾಂಕಾ ಗಾಂಧಿ ಅವರು ರಾಜ್ಯದಿಂದ ಸ್ಪರ್ಧಿಸುತ್ತಿರುವುದಕ್ಕೆ ವಯನಾಡ್ ಮಾತ್ರವಲ್ಲ, ಕೇರಳವೇ ಸಂಭ್ರಮಿಸುತ್ತಿದೆ. ರಾಹುಲ್ ಗಾಂಧಿ ಅವರನ್ನು ಹೇಗೆ ಒಪ್ಪಿಕೊಂಡಿದೆಯೋ ಈ ಕ್ಷೇತ್ರ, ಅದೇ ರೀತಿ ಪ್ರಿಯಾಂಕಾ ಅವರನ್ನೂ ಒಪ್ಪಿಕೊಳ್ಳಲಿದ್ದಾರೆ. ಪ್ರಿಯಾಂಕಾ ಅವರು ಮುಂಚೂಣಿಯ ಪ್ರಚಾರಕರಾಗಿದ್ದರು. ಪ್ರಭುತ್ವ ಹಾಗೂ ಕೋಮುವಾದಿಶಕ್ತಿಗಳ ವಿರುದ್ಧ ಪ್ರಬಲ ಪ್ರಚಾರ ನಡೆಸಿದ್ದರು. ಕಾಂಗ್ರೆಸ್‌ ಹಾಗೂ ಯುಡಿಎಫ್‌ ಮೈತ್ರಿಕೂಟವು ಪ್ರಿಯಾಂಕಾ ಅವರನ್ನು ಸ್ವಾಗತಿಸಿದೆ’ ಎಂದಿದ್ದಾರೆ.

‘ಎರಡು ಕ್ಷೇತ್ರಗಳಲ್ಲಿ ಗೆದ್ದಿರುವ ರಾಹುಲ್ ಅವರು ಒಂದು ಕ್ಷೇತ್ರವನ್ನು ಉಳಿಸಿಕೊಳ್ಳಲೇಬೇಕಾದಾಗ ರಾಜಕೀಯ ನಿರ್ಧಾರವಾಗಿ ರಾಯ್‌ಬರೇಲಿಯನ್ನು ಉಳಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರೂ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ನಂತರ ಒಂದನ್ನು ಉಳಿಸಿಕೊಂಡ ಉದಾಹರಣೆ ನಮ್ಮ ಮುಂದೆಯೇ ಇದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.