ಚಂಡೀಗಢ: ಬಿಜೆಪಿಯು ನನಗೆ ಹೆದರಿದೆ. ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಬಾರದೆಂದು ಉದ್ದೇಶಿಸಿಯೇ ನನ್ನನ್ನು ಜೈಲಿಗೆ ಕಳುಹಿಸಲಾಯಿತು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮಂಗಳವಾರ ಹೇಳಿದ್ದಾರೆ.
ಕುರುಕ್ಷೇತ್ರದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಮಾರ್ಚ್ 16ರಂದು ಚುನಾವಣೆಯ ದಿನಾಂಕ ಘೋಷಣೆಯಾಯಿತು. ಮಾರ್ಚ್ 21ರಂದು ನನ್ನನ್ನು ಬಂಧಿಸಿದ್ದರು. ಏಕೆಂದರೆ ಬಿಜೆಪಿಯವರು ನನ್ನನ್ನು ನೋಡಿದರೆ ಭಯಭೀತರಾಗುತ್ತಾರೆ. ನಾನು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಬಾರದೆಂಬುವುದೇ ಅವರ ಉದ್ದೇಶವಾಗಿತ್ತು ಎಂದು ಕಿಡಿಕಾರಿದ್ದಾರೆ.
ಪೆಹೋವಾಗೂ ನನಗೂ ಸಂಬಂಧವಿದೆ. ಹೇಗೆ ಎಂದು ನೀವು (ಜನ) ಕೇಳಬಹುದು ಪಂಜಾಜ್ ಮುಖ್ಯಮಂತ್ರಿ ಭಗವಂತ್ ಮಾನ್ ನನ್ನ ಕಿರಿಯ ಸಹೋದರನಂತೆ. ಮಾನ್ ಅವರ ಪತ್ನಿ ಸೇರಿದಂತೆ ಅವರ ಸಂಬಂಧಿಕರು ಪೆಹೋವಾದವರು ಎಂದು ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ತಿಹಾರ್ ಜೈಲಿನಿಂದ ಅವರು ಮೇ 10ರಂದು ಹೊರಬಂದರು.
ಜಾಮೀನಿನ ಬಳಿಕ ಹೊರಬಂದ ಕೇಜ್ರಿವಾಲ್ ಇದೇ ಮೊದಲ ಬಾರಿಗೆ ಹರಿಯಾಣಕ್ಕೆ ಭೇಟಿ ನೀಡಿದ್ದಾರೆ. ರಾಜ್ಯದ ಒಟ್ಟು 10 ಲೋಕಸಭಾ ಸ್ಥಾನಗಳಿಗೆ ಮೇ 25ರಂದು ಮತದಾನ ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಹೊರಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.