ADVERTISEMENT

ಒಡಿಶಾ | ಇವಿಎಂಗೆ ಹಾನಿ; ಬಿಜೆಪಿಯ ಬಂಧಿತ ಅಭ್ಯರ್ಥಿ ಬಿಡುಗಡೆಗೆ ಪ್ರತಿಭಟನೆ

ಪಿಟಿಐ
Published 27 ಮೇ 2024, 14:34 IST
Last Updated 27 ಮೇ 2024, 14:34 IST
   

ಖುರ್ದಾ (ಒಡಿಶಾ): ಇವಿಎಂ ಹಾನಿಗೊಳಿಸಿರುವ ಆರೋಪದ ಮೇಲೆ ಬಂಧಿಸಲಾಗಿರುವ ಖುರ್ದಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಶಾಂತ್‌ ಜಗದೇವ್‌ ಅವರನ್ನು ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ಖುರ್ದಾ ಜಿಲ್ಲಾ ಉಪ ವಿಭಾಗಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಒಡಿಶಾದಲ್ಲಿ ಮೇ 25ರಂದು ಲೋಕಸಭೆಯ ಆರು ಮತ್ತು ವಿಧಾನಸಭೆಯ 42 ಕ್ಷೇತ್ರಗಳಿಗೆ ಏಕಕಾಲದಲ್ಲಿ ಮತದಾನ ನಡೆದಿತ್ತು.

ಜಗದೇವ್‌ ಅವರನ್ನು ಬಿಡುಗಡೆ ಮಾಡದಿದ್ದರೆ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ, ಖುರ್ದಾ ಪಟ್ಟಣ ಬಂದ್‌ಗೆ ಕರೆ ನೀಡಬೇಕಾಗುತ್ತದೆ ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿದರು.

ADVERTISEMENT

ಜಗದೇವ್‌ ಅವರನ್ನು ಬಂಧಿಸಲು ಆಡಳಿತಾರೂಢ ಬಿಜೆಡಿ ಸಂಚು ರೂಪಿಸಿದೆ ಎಂದು ಆರೋಪಿಸಿದ ಬಿಜೆಪಿ ಕಾರ್ಯಕರ್ತರು, ಮತಗಟ್ಟೆಯ ಸಿ.ಸಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿದರು.

‘ಮತಗಟ್ಟೆ ಅಧಿಕಾರಿ ನೀಡಿದ ದೂರನ್ನು ಆಧರಿಸಿ ಎಫ್‌ಐಆರ್‌ ದಾಖಲಿಸಲಾಗಿದೆ. ಜಗದೇವ್‌ ಅವರ ವಿರುದ್ಧ ಐಪಿಸಿಯ ವಿವಿಧ ಕಲಂಗಳು ಮತ್ತು ಪ್ರಜಾಪ್ರಾತಿನಿಧ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ’ ಎಂದು ಖುರ್ದಾದ ಪೊಲೀಸ್‌ ವರಿಷ್ಠಾಧಿಕಾರಿ ಅವಿನಾಶ್‌ ಕುಮಾರ್‌ ತಿಳಿಸಿದರು.

ಅಭ್ಯರ್ಥಿಯು ಮತಗಟ್ಟೆಯಲ್ಲಿ ಗಲಾಟೆ ಮಾಡಿ, ಮತದಾನಕ್ಕೆ ಅಡ್ಡಿಪಡಿಸಿದ್ದಾರೆ. ಅಲ್ಲದೆ ಅಲ್ಲಿನ ಸಿಬ್ಬಂದಿಯನ್ನು ನಿಂದಿಸಿದ್ದಾರೆ ಎಂದು ಮತಗಟ್ಟೆ ಅಧಿಕಾರಿ ದೂರು ನೀಡಿದ್ದಾರೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.