ನವದೆಹಲಿ: ಶ್ರೀ ರಾಮ ಏನಾದರೂ ಈಗ ಇದ್ದಿದ್ದರೆ ಬಿಜೆಪಿಯವರು ಜಾರಿ ನಿರ್ದೇಶನಾಲಯ(ಇ.ಡಿ) ಮತ್ತು ಸಿಬಿಐ ಅನ್ನು ಅವನ ಮನೆಗೆ ಕಳುಹಿಸಿ, ಹಣೆಗೆ ಬಂದೂಕು ಇಟ್ಟು, ನೀನು ಬಿಜೆಪಿಗೆ ಸೇರುತ್ತಿಯಾ ಇಲ್ಲ ಜೈಲಿಗೆ ಹೋಗುತ್ತೀಯಾ ಎಂಬುದಾಗಿ ಪ್ರಶ್ನಿಸುತ್ತಿದ್ದರು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಜೆಟ್ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ಕೇಜ್ರಿವಾಲ್, ‘ಬಜೆಟ್ ಉತ್ತಮವಾಗಿದ್ದು, ಎಎಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟವು ದೆಹಲಿಯ ಏಳು ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸಲಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ’ ಎಂದರು.
‘ದೆಹಲಿಯ ಎಎಪಿ ಸರ್ಕಾರವು ವಿಕಾಸ ಅಥವಾ ಅಭಿವೃದ್ಧಿಯ ಮಾದರಿಯನ್ನು ಅನುಸರಿಸುತ್ತಿದೆ. ಆದರೆ ಬಿಜೆಪಿಯು ವಿರೋಧ ಪಕ್ಷಗಳ ಮೇಲೆ ದಾಳಿ ನಡೆಸುವ ಮತ್ತು ಸರ್ಕಾರಗಳನ್ನು ಉರುಳಿಸುವ ಮೂಲಕ ವಿನಾಶದ ಮಾದರಿಯನ್ನು ಅನುಸರಿಸುತ್ತಿದೆ’ ಎಂದು ಟೀಕಿಸಿದರು.
ತಮ್ಮ ವಿರುದ್ಧ 8 ಸಮನ್ಸ್ ಜಾರಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನನ್ನನ್ನು ಬಂಧಿಸಿ ಜೈಲಿಗೆ ಕಳುಹಿಸುವ ಮೂಲಕ ಸರ್ಕಾರವನ್ನು ಉರುಳಿಸುವ ಯೋಜನೆಯನ್ನು ಬಿಜೆಪಿ ಮಾಡಿದೆ. ನಾನು ದೇಶದ ಪ್ರಮುಖ ಭಯೋತ್ಪಾದಕನಾಗಿದ್ದರೆ ನನಗೆ ಇಷ್ಟು ಸಮನ್ಸ್ಗಳನ್ನು ನೀಡುತ್ತಿದ್ದರೇ’ ಎಂದು ಪ್ರಶ್ನಿಸಿದರು.
’ಬಿಜೆಪಿಯು ವಿರೋಧ ಪಕ್ಷಗಳನ್ನು ದಮನಿಸಲು ಪ್ರಯತ್ನಿಸುತ್ತಿದೆ. ಇದರೊಂದಿಗೆ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.