ADVERTISEMENT

ಮಹಿಳೆ ಮೇಲೆ ಹಲ್ಲೆ ಆರೋಪ: ಅಧಿಕಾರಿ ಪುತ್ರನಿಗಾಗಿ ಪೊಲೀಸರ ಶೋಧ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2023, 16:14 IST
Last Updated 17 ಡಿಸೆಂಬರ್ 2023, 16:14 IST
   

ಮುಂಬೈ: ಮಹಿಳೆಯೊಬ್ಬರಿಗೆ ಮೇಲೆ ಹಲ್ಲೆ ಮಾಡಿ, ಆಕೆಯ ಮೇಲೆ ವಾಹನವನ್ನು ಹರಿಸಲು ಯತ್ನಿಸಿದ ಆರೋಪದ ಪ್ರಕರಣದಲ್ಲಿ ಐಎಎಸ್‌ ಅಧಿಕಾರಿಯೊಬ್ಬರ ಪುತ್ರ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನಿಲ್‌ಕುಮಾರ್ ಗಾಯಕ್ವಾಡ್ ಅವರ ಪುತ್ರ ಅಶ್ವಜಿತ್‌ ಗಾಯಕ್ವಾಡ್‌ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ್ದರು.

ಅಧಿಕಾರಿಯ ಪುತ್ರನ ವಿರುದ್ಧ ಕಾಸರ್‌ವದ್‌ವಾಲಿ ಠಾಣೆಯಲ್ಲಿ ಹಲ್ಲೆ (ಐಪಿಸಿ ಸೆಕ್ಷನ್‌ 323), ನಿರ್ಲಕ್ಷ್ಯದ ವಾಹನ ಚಾಲನೆ (279),  ಶಾಂತಿ ಕದಡಲು ಯತ್ನ (504) ಸೇರಿ ವಿವಿಧ ‍ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ.

ADVERTISEMENT

ಪ್ರಿಯಾ ಸಿಂಗ್‌ ಹೆಸರಿನ ಮಹಿಳೆಯು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ತನ್ನ ಸಹೋದರಿ ಜೊತೆಗೂಡಿ ಠಾಣೆಯಲ್ಲಿ ಬ್ಯೂಟಿ ಪಾರ್ಲರ್‌ವೊಂದನ್ನು ನಡೆಸುತ್ತಿದ್ದಾರೆ. ಪೊಲೀಸರು ಈಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

ಆರೋಪಿಯ ಪತ್ತೆಗೆ ಡಿಸಿಪಿ ಅಮರ್ ಜಾಧವ್‌ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಠಾಣೆಯ ಪೊಲೀಸ್ ವರಿಷ್ಠಾಧಿಕಾರಿ ಜೈಜೀತ್ ಸಿಂಗ್ ತಿಳಿಸಿದ್ದಾರೆ.

ಕೃತ್ಯವು ಡಿ.11ರಂದು ಬೆಳಗಿನ ಜಾವ 4.30ಕ್ಕೆ ನಡೆದಿದೆ ಎನ್ನಲಾಗಿದೆ. ಮಹಿಳೆಯು ಅಶ್ವಜಿತ್‌ನನ್ನು ಭೇಟಿ ಮಾಡಲು ತೆರಳಿದ್ದು, ಆಗ ವಾಗ್ವಾದ ನಡೆದಿದೆ. ಮಹಿಳೆ ತೆರಳವಾಗ ಆರೋಪಿ ಆಕೆಯ ಮೇಲೆ ವಾಹನ ಹರಿಸಲು ಯತ್ನಿಸಿದ ಎಂದು ದೂರಲಾಗಿದೆ. ಮಹಿಳೆಯು ಹಲ್ಲೆ ಘಟನೆಯನ್ನು ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿಯೂ ಬರೆದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.