ನಾಗ್ಪುರ (ಮಹಾರಾಷ್ಟ್ರ): ಪಾದಚಾರಿ ಮಾರ್ಗದಲ್ಲಿ ಮಲಗಿದ್ದ 9 ಕಾರ್ಮಿಕರ ಮೇಲೆ ಅತಿವೇಗದಿಂದ ಬಂದ ಕಾರೊಂದು ಹರಿದು ಇಬ್ಬರು ಮೃತಪಟ್ಟ ಘಟನೆ ಮಹಾರಾಷ್ಟ್ರದ ವಾಥೋಡಾ ಪೊಲೀಸ್ ಠಾಣಾ ವ್ಯಾಪ್ತಿಯ ದಿಘೋರಿ ಚೌಕ್ ಸಮೀಪ ನಡೆದಿದೆ.
ಭಾನುವಾರ ತಡರಾತ್ರಿ 12 ಗಂಟೆಗೆ ಸುಮಾರಿಗೆ ಘಟನೆ ನಡೆದಿದೆ. ರಾಜಸ್ಥಾನ ಮೂಲದ 9 ಕಾರ್ಮಿಕರು ಪಾದಚಾರಿ ಮಾರ್ಗದಲ್ಲಿ ಮಲಗಿದ್ದಾಗ, ಬರ್ತಡೇ ಪಾರ್ಟಿಯಿಂದ ಹಿಂದಿರುಗುತ್ತಿದ್ದ ಆರು ಯುವಕರು ಇವರ ಮೇಲೆ ಕಾರು ಚಲಾಯಿಸಿದ್ದಾರೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಉಳಿದ ಏಳು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅಪಘಾತಕ್ಕೊಳಗಾದವರಲ್ಲಿ ಮಹಿಳೆಯರು, ಮಕ್ಕಳು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಿನಗೂಲಿ ಕಾರ್ಮಿಕರಾದ ಇವರು ಬೀದಿಗಳಲ್ಲಿ ಆಟಿಕೆಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ.
‘ಬರ್ತಡೇ ಪಾರ್ಟಿಯಿಂದ ಹಿಂದಿರುಗುತ್ತಿದ್ದ 6 ಯುವಕರು ಫುಟ್ಪಾತ್ನಲ್ಲಿ ಮಲಗಿದ್ದ ಒಂಬತ್ತು ರಾಜಸ್ಥಾನಿ ಕಾರ್ಮಿಕರ ಮೇಲೆ ತಮ್ಮ ಕಾರನ್ನು ಹರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದು, ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ’ ಎಂದು ವಾಥೋಡಾ ಪೊಲೀಸ್ ಠಾಣಾ ಅಧಿಕಾರಿ ವಿಜಯ್ ದಿಘೆ ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆ ಐಎಎನ್ಎಸ್ ಟ್ವೀಟ್ ಮಾಡಿದೆ.
ಇತ್ತೀಚೆಗೆ ಪುಣೆಯಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಪಾರ್ಟಿ ಮುಗಿಸಿ ಪೋಶೆ ಕಾರಿನಲ್ಲಿ ಹಿಂದಿರುಗುತ್ತಿದ್ದ ಬಾಲಕನೊಬ್ಬ ಬೈಕ್ಗೆ ಡಿಕ್ಕಿ ಹೊಡೆದಿದ್ದ. ಪರಿಣಾಮ ಇಬ್ಬರು ಟೆಕಿಗಳು ಸ್ಥಳದಲ್ಲೇ ಮೃತಪಟ್ಟಿದ್ದರು. ತನಿಖೆಯಲ್ಲಿ ಬಾಲಕ ಮದ್ಯ ಸೇವಿಸಿದ್ದನೆಂದು ತಿಳಿದುಬಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.