ತಿರುವನಂತಪುರ: ಇಲ್ಲಿನ ಪಾಲ್ಕುಲಂಗರ ಪ್ರದೇಶದ ಮನೆಯ ಕಾಂಪೌಂಡ್ನಲ್ಲಿ ಗಬ್ಬದ ಬೆಕ್ಕೊಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವಂಚಿಯೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರತೀಯ ಪ್ರಾಣಿ ಸಂರಕ್ಷಣಾ ಸಂಸ್ಥೆಗಳ ಒಕ್ಕೂಟ ಸಂಯೋಜಕಿ ಪಾರ್ವತಿ ಮೋಹನ್ ಮತ್ತು ‘ಪೀಪಲ್ ಫಾರ್ ಅನಿಮಲ್ಸ್’ ಸಂಸ್ಥೆಯ ಕೇರಳದ ಕಾರ್ಯದರ್ಶಿ ಲತಾ ಎಂಬುವವರು ದೂರು ನೀಡಿದ್ದಾರೆ.
‘ಬೆಕ್ಕನ್ನು ಕಾಂಪೌಂಡ್ನ ಕಬ್ಬಿಣದ ಕಂಬಕ್ಕೆ ನೇಣು ಬಿಗಿಯಲಾಗಿತ್ತು. ಮನೆಯ ಶೆಡ್ಗೆ ಕಾಂಪೌಂಡ್ ಹೊಂದಿಕೊಂಡಿದೆ. ಬೆಕ್ಕಿನ ಮರಣೋತ್ತರ ಪರೀಕ್ಷೆ ನಡೆದಿದ್ದು, ಅದು ಗಬ್ಬದ ಬೆಕ್ಕಾಗಿದೆ’ ಎಂದು ದೂರುದಾರರಲ್ಲಿ ಒಬ್ಬರಾದ ಪಾರ್ವತಿ ಮಾಹಿತಿ ನೀಡಿದ್ದಾರೆ.
‘ಶೆಡ್ ಅನ್ನು ಕ್ಲಬ್ ಆಗಿ ಬಳಸಲಾಗುತ್ತಿತ್ತು. ಮನೆಯ ಮಾಲೀಕ ಸೇರಿದಂತೆ ಸ್ಥಳೀಯರು ಇದನ್ನು ಮದ್ಯಪಾನದ ಅಡ್ಡೆಯನ್ನಾಗಿ ಮಾಡಿಕೊಂಡಿದ್ದರು. ಇಲ್ಲಿಗೆ ನಿತ್ಯ ಬರುವವರೇ ಮೋಜಿಗಾಗಿ ಬೆಕ್ಕನ್ನು ನೇಣು ಹಾಕಿ ವಿಕೃತಿ ಮೆರೆದಿರಬಹುದು. ಮನೆಯ ಅಕ್ಕಪಕ್ಕದ ನಿವಾಸಿಗಳೂ ಇದನ್ನು ದೃಢಪಡಿಸಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.
ಸ್ಥಳೀಯರು ಬೆಕ್ಕಿನ ಕಳೇಬರವನ್ನು ಮಣ್ಣು ಮಾಡಲು ಪ್ರಯತ್ನಿಸಿದರು. ಆದರೆ, ಅವರ ಮನವೊಲಿಸಿ ದೂರು ನೀಡಲು ನೆರವಾಗುವಂತೆ ಕೋರಲಾಯಿತು. ಪ್ರಾರಂಭದಲ್ಲಿ ಪೊಲೀಸರೂ ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಲಿಲ್ಲ. ನಂತರ ಪ್ರಾಣಿ ಹಕ್ಕುಗಳ ಕಾಯ್ದೆ ಅಡಿ ದೂರು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.