ನವದೆಹಲಿ: ಬಾಹ್ಯಾಕಾಶ ವಿಜ್ಞಾನಿ ನಂಬಿ ನಾರಾಯಣನ್ ಅವರನ್ನು 1994ರ ಇಸ್ರೊ ಬೇಹುಗಾರಿಕೆ ಪ್ರಕರಣದದಲ್ಲಿ ನಿಯಮಬಾಹಿರವಾಗಿ ಸಿಲುಕಿಸಿದ್ದ ಪ್ರಕರಣದ ಸಂಬಂಧ ಸಿಬಿಐ ಆರೋಪಪಟ್ಟಿಯನ್ನು ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳದ ಮಾಜಿ ಡಿಜಿಪಿ ಸಿಬಿ ಮ್ಯಾಥ್ಯೂ, ಗುಜರಾತ್ನ ಮಾಜಿ ಡಿಜಿಪಿ ಆರ್.ಬಿ.ಶ್ರೀಕುಮಾರ್ ಮತ್ತು ಮೂವರು ನಿವೃತ್ತ ಪೊಲೀಸ್ ಅಧಿಕಾರಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ 2021ರಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿತ್ತು.
ಮ್ಯಾಥ್ಯೂ ಅವರು 1994ರ ಇಸ್ರೋ ಬೇಹುಗಾರಿಕೆ ಪ್ರಕರಣದ ತನಿಖೆಗೆ ರಚಿಸಿದ್ದ ವಿಶೇಷ ತಂಡದ ನೇತೃತ್ವವನ್ನು ಮ್ಯಾಥ್ಯೂ ವಹಿಸಿದ್ದರು. ಶ್ರೀಕುಮಾರ್ ಅವರು ಗುಪ್ತದಳದ ಉಪ ನಿರ್ದೇಶಕರಾಗಿದ್ದರು. ಅವರಲ್ಲದೆ, ಕೇರಳ ಎಸ್ಐಬಿಗೆ ನಿಯೋಜಿತರಾಗಿದ್ದ ಪಿ.ಎಸ್.ಜಯಪ್ರಕಾಶ್, ಆಗ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಕೆ.ಕೆ.ಜೋಷುವಾ, ಇನ್ಸ್ಪೆಕ್ಟರ್ ಎಸ್.ವಿಜಯನ್ ಅವರ ವಿರುದ್ಧ ಆರೋಪಪಟ್ಟಿ ದಾಖಲಿಸಲಾಗಿದೆ.
ಇವರ ವಿರುದ್ಧ ಕ್ರಿಮಿನಲ್ ಸಂಚು (120ಬಿ), ನಿಯಮಬಾಹಿರವಾಗಿ ಬಂಧನದಲ್ಲಿ ಇಟ್ಟಿದ್ದು (342), ನಕಲಿ ದಾಖಲೆಗಳ ಸೃಷ್ಟಿ (167), ಸಾಕ್ಷ್ಯ ತಿರುಚಿರುವುದು (193) ಮತ್ತು ಮಹಿಳೆಯ ಮೇಲೆ ಕ್ರಿಮಿನಲ್ ಹಲ್ಲೆ (354) ಕುರಿತಂತೆ ಐಪಿಸಿ ಸೆಕ್ಷನ್ಗಳ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಉನ್ನತಾಧಿಕಾರ ಸಮಿತಿಯ ವರದಿ ಆಧರಿಸಿ ಸುಪ್ರಿಂ ಕೋರ್ಟ್ ಏಪ್ರಿಲ್ 15, 2021ರಂದು ನೀಡಿದ್ದ ಆದೇಶದ ಅನುಸಾರ ಸಿಬಿಐ ಪ್ರಕರಣವನ್ನು ದಾಖಲಿಸಿತ್ತು. ಬೇಹುಗಾರಿಕೆ ಪ್ರಕರಣದ ತನಿಖೆಯಲ್ಲಿ ಕರ್ತವ್ಯಲೋಪ ತೋರಿದ್ದಾರ ಎಂದು ಆರೋಪಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.