ಪುಣೆ: ಕೇಂದ್ರ ಸರ್ಕಾರವು ಮರಾಠ ಸಮುದಾಯ ಮತ್ತು ಇತರ ಹಿಂದುಳಿದ ವರ್ಗಗಳ ಮೀಸಲಾತಿ ಬೇಡಿಕೆಗೆ ಸಂಬಂಧಿಸಿದ ಸಮಸ್ಯೆಗಳ ವಿಷಯದಲ್ಲಿ ಮೂಕಪ್ರೇಕ್ಷಕನಂತೆ ಇರಕೂಡದು; ಬಗೆಹರಿಸಲು ಮುಂದೆ ಬರಬೇಕು ಎಂದು ಎನ್ಸಿಪಿ (ಶರದ್ ಪವಾರ್ ಬಣ) ಮುಖ್ಯಸ್ಥ ಶರದ್ ಪವಾರ್ ಹೇಳಿದರು.
ಮಹಾರಾಷ್ಟ್ರದ ಪುಣೆಯ ಬಾರಾಮತಿಯಲ್ಲಿ ಸುದ್ದಿಗಾರರೊಂದಿಗೆ ಪವಾರ್ ಗುರುವಾರ ಮಾತನಾಡಿದರು. ರಾಜ್ಯದಲ್ಲಿ ಮರಾಠ ಮೀಸಲಾತಿ ವಿಚಾರವಾಗಿ ಹೆಚ್ಚುತ್ತಿರುವ ಮರಾಠ – ಒಬಿಸಿ ಸಂಘರ್ಷದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ‘ಸಮಸ್ಯೆ ಬಗೆಹರಿಸಲು ಕೇಂದ್ರ ಮುಂದಾಳತ್ವ ವಹಿಸಬೇಕು. ಕೇಂದ್ರ ಮತ್ತು ರಾಜ್ಯಗಳ ನೀತಿ ಹಾಗೂ ಕಾನೂನಿನಲ್ಲಿ ತಿದ್ದುಪಡಿಗಳ ಅಗತ್ಯವಿದೆ. ಜನರ ಹೋರಾಟವು ಮಿತಿ ಮೀರದಂತೆ ಮತ್ತು ಸಾಮಾಜಿಕ ಉದ್ವಿಗ್ನತೆ ನಡೆಯದಂತೆ ಸರ್ಕಾರ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದೆ ವಿಪಕ್ಷಗಳೆಲ್ಲ ಸೇರಿ ಯಾವ ರೀತಿ ಮುಂದಡಿ ಇಡಬೇಕು ಎಂದು ನಿರ್ಧರಿಸಲಾಗುವುದು’ ಎಂದು ಎಚ್ಚರಿಸಿದರು.
ಕಳೆದ ಫೆಬ್ರುವರಿಯಲ್ಲಿ ಮಹಾರಾಷ್ಟ್ರ ಸರ್ಕಾರವು ಮರಾಠ ಸಮುದಾಯಕ್ಕೆ ಪ್ರತ್ಯೇಕವಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ10ರಷ್ಟು ಮೀಸಲಾತಿಯನ್ನು ನೀಡುವ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿತು. ಆದರೂ ಒಬಿಸಿ (ಇತರ ಹಿಂದುಳಿದ ವರ್ಗ) ಅಡಿಯಲ್ಲಿ ಮೀಸಲಾತಿ ನೀಡುವಂತೆ ಸಮುದಾಯವು ಒತ್ತಾಯಿಸುತ್ತಿದೆ. ಇದನ್ನು ಒಬಿಸಿ ಸಮುದಾಯ ವಿರೋಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.