ನವದೆಹಲಿ: ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಬಳಸಿಕೊಂಡು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ನೋಟಿಸ್ ನೀಡುವ ಮೂಲಕ ಬಂಧಿಸಲು ಕೇಂದ್ರ ಸರ್ಕಾರ ತಂತ್ರ ಹೆಣೆಯುತ್ತಿದೆ ಎಂದು ದೆಹಲಿ ಸಚಿವ ಗೋಪಾಲ್ ರಾಯ್ ಶುಕ್ರವಾರ ಆರೋಪಿಸಿದ್ದಾರೆ.
ಸಿಆರ್ಪಿಸಿ ಸೆಕ್ಷನ್ 41ಎ ಅಡಿಯಲ್ಲಿ (ಪೊಲೀಸ್ ಅಧಿಕಾರಿಯ ಎದುರು ಹಾಜರಾಗಲು ಸೂಚನೆ) ಸಿಬಿಐ ನೋಟಿಸ್ ಜಾರಿ ಮಾಡಲು ಯೋಜಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಜಾರಿ ನಿರ್ದೇಶನಾಲಯ (ಇ.ಡಿ) ನೀಡಿದ ಎಲ್ಲ ಸಮನ್ಸ್ ವಿಫಲವಾದ ಬಳಿಕ ಸಿಬಿಐ ಅನ್ನು ದುರುಪಯೋಗಪಡಿಸಿಕೊಳ್ಳಲು ಬಿಜೆಪಿ ಮುಂದಾಗಿದೆ ಎಂದು ಅವರು ಆರೋಪಿಸಿದ್ದಾರೆ.
ವಿರೋಧ ಪಕ್ಷಗಳ ಒಕ್ಕೂಟ 'ಇಂಡಿಯಾ' ರಚನೆಯಾದ ಬಳಿಕ ಬಿಜೆಪಿ ವಿಚಲಿತಗೊಂಡಿದೆ. ಸಿಬಿಐ ಬಳಸಿ ನೋಟಿಸ್ ನೀಡುವ ಮೂಲಕ ಕೇಜ್ರಿವಾಲ್ ಅವರನ್ನು ಬಂಧಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಯೋಜಿಸಿದೆ. ಸಿಆರ್ಪಿಸಿ ಸೆಕ್ಷನ್ 41ಎ ಅಡಿಯಲ್ಲಿ ನೋಟಿಸ್ ನೀಡಿ ಬಂಧಿಸುವ ಯೋಜನೆ ಇದೆ ಎಂದು ನಮಗೆ ತಿಳಿದು ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರಿಗೆ ಸಂಬಂಧಪಟ್ಟ ಅನೇಕ ಸ್ಥಳಗಳಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ದಾಳಿ ನಡೆಸಿದರೂ ಭ್ರಷ್ಟಾಚಾರ ಸಾಬೀತುಪಡಿಸಲು ಯಾವುದೇ ಸಾಕ್ಷ್ಯಗಳು ದೊರಕಿಲ್ಲ ಎಂದು ಅವರು ಹೇಳಿದರು.
ಬಿಜೆಪಿ ಮತ್ತು ತನಿಖಾ ತಂಡಗಳ ಬೆದರಿಕೆಗಳಿಗೆ ಎಎಪಿ ಹೆದರುವುದಿಲ್ಲ. ಇನ್ನು ಮುಂದೆಯೂ ಹೆದರುವುದಿಲ್ಲ. 'ಇಂಡಿಯಾ' ಒಕ್ಕೂಟದ ಮೈತ್ರಿ ಪಕ್ಷವಾಗಿ ಎಎಪಿ ಚುನಾವಣೆಯನ್ನು ಎದುರಿಸಲಿದೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.