ಅಮರಾವತಿ: ಆಂಧ್ರಪ್ರದೇಶ ಸರ್ಕಾರ ಕೇಳಿದ ಕೂಡಲೇ ಕೇಂದ್ರ ಸರ್ಕಾರವು ಪೋಲಾವರಂ ನೀರಾವರಿ ಯೋಜನೆಗೆ ಬೆಂಬಲ ನೀಡಲಿದೆ ಎಂದು ಆಂಧ್ರಪ್ರದೇಶದ ಬಿಜೆಪಿ ಘಟಕದ ಮುಖ್ಯಸ್ಥೆ ಡಿ.ಪುರಂದೇಶ್ವರಿ ಹೇಳಿದರು.
ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಈ ಯೋಜನೆ ಕುಂಠಿತಗೊಂಡಿತ್ತು. ಈಗ ‘ಟಿಡಿಪಿ, ಜನಸೇನಾ ಮತ್ತು ಬಿಜೆಪಿಯನ್ನು ಒಳಗೊಂಡ ಸರ್ಕಾರದ ನೇತೃತ್ವವನ್ನು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ವಹಿಸಿದ್ದು, ಖಂಡಿತವಾಗಿಯೂ ಕೇಂದ್ರದ ಸಹಕಾರ ಸಿಗಲಿದೆ ಎಂದರು.
ಪೋಲಾವರಂ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಕೇಂದ್ರ ಸರ್ಕಾರವು ಘೋಷಿಸಿದಾಗಿನಿಂದ ಈವರೆಗೆ ತನ್ನ ಸಹಕಾರವನ್ನು ನೀಡುತ್ತಿದೆ’ ಎಂದರು.
‘ಬಹುಶಃ ಬಿಲ್ಗಳನ್ನು ಸಲ್ಲಿಸುವುದರಲ್ಲಿ ವಿಳಂಬವಾಗಿರಬಹುದು. ಒಮ್ಮೆ ಬಿಲ್ಗಳನ್ನು ಸಲ್ಲಿಸಿದ ತಕ್ಷಣ ಯೋಜನೆಯ ಹಣ ಬಿಡುಗಡೆಯಾಗಲಿದೆ. ಆದರೆ, ಸರಿಯಾದ ಕ್ರಮದಲ್ಲಿ ಕೇಂದ್ರಕ್ಕೆ ಬಿಲ್ಗಳನ್ನು ಸಲ್ಲಿಸುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ’ ಎಂದರು.
ಪೋಲಾವರಂ, 4.3 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ, 960 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಹಾಗೂ 611 ಹಳ್ಳಿಗಳ ಸುಮಾರು 30 ಲಕ್ಷ ಜನರಿಗೆ ಕುಡಿಯುವ ನೀರು ಒದಗಿಸುವ ಬಹು ಉದ್ದೇಶಿತ ಯೋಜನೆಯಾಗಿದೆ. ಇದರಲ್ಲಿ 80 ಟಿಎಂಸಿ ನೀರನ್ನು ಕೃಷ್ಣಾ ನದಿಯ ಜಲಾನಯನ ಪ್ರದೇಶಕ್ಕೆ ಹರಿಸಲೂ ಉದ್ದೇಶಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.