ADVERTISEMENT

ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಪ್ರಧಾನ ಅರ್ಚಕ ನಿಧನ

ಪಿಟಿಐ
Published 22 ಜೂನ್ 2024, 14:34 IST
Last Updated 22 ಜೂನ್ 2024, 14:34 IST
-
-   

ವಾರಾಣಸಿ: ಅಯೋಧ್ಯೆಯಲ್ಲಿ ಬಾಲ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ವಿಧಿಗಳನ್ನು ನೆರವೇರಿಸಿದ್ದ ಪ್ರಧಾನ ಅರ್ಚಕ ಆಚಾರ್ಯ ಲಕ್ಷ್ಮೀಕಾಂತ ದೀಕ್ಷಿತ್‌ (86) ಶನಿವಾರ ನಿಧನರಾದರು.

ಕೆಲ ದಿನಗಳಿಂದ ಅನಾರೋಗ್ಯಪೀಡಿತರಾಗಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಗಿನ 6.45ಕ್ಕೆ ಅವರು ಕೊನೆಯುಸಿರೆಳೆದರು. ಅವರ ಅಂತ್ಯಕ್ರಿಯೆಯನ್ನು ಮಣಿಕರ್ಣಿಕಾ ಘಾಟ್‌ನಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ದೀಕ್ಷಿತ್ ಅವರು ವೇದಗಳಲ್ಲಿ ಅಪಾರ ಪಾಂಡಿತ್ಯವುಳ್ಳರಾಗಿದ್ದರು. ಜನವರಿ 22ರಂದು ಬಾಲ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ 12 ಅರ್ಚಕರಿದ್ದ ತಂಡವನ್ನು ಇವರು ಮುನ್ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ‘ಯಜಮಾನ’ ಸ್ಥಾನದಲ್ಲಿದ್ದು, ಪ್ರಾಣ ಪ್ರತಿಷ್ಠಾಪನೆಯ ಧಾರ್ಮಿಕ ವಿಧಿಗಳನ್ನು ನೆರವೇರಿಸಿದ್ದರು.

ADVERTISEMENT

ಅವರು ಇಲ್ಲಿನ ಮೀರ್‌ ಘಾಟ್‌ನಲ್ಲಿರುವ ಸಂಗದೇವ ಮಹಾವಿದ್ಯಾಲಯದಲ್ಲಿ ಹಿರಿಯ ಆಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.

ಲಕ್ಷ್ಮೀಕಾಂತ ದೀಕ್ಷಿತ್‌ ಅವರ ಹಿರಿಯರು ಮಹಾರಾಷ್ಟ್ರದ ಸೊಲ್ಲಾಪುರದವರು. ಹಲವು ತಲೆಮಾರುಗಳಿಂದ ಅವರ ಕುಟುಂಬ ವಾರಾಣಸಿಯಲ್ಲಿಯೇ ನೆಲೆಸಿದೆ. ಇವರ ಪೂರ್ವಜರು ಆಗಿನ ನಾಗ್ಪುರ ಮತ್ತು ನಾಶಿಕ್‌ ರಾಜಸಂಸ್ಥಾನಗಳಲ್ಲಿ ಅರ್ಚಕರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.