ಚೆನ್ನೈ: ಕೊಯಮತ್ತೂರಿನಲ್ಲಿ ಐಎಸ್ ಪ್ರೇರಿತ ಕಾರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಶನಿವಾರ ತಮಿಳುನಾಡಿನ 27 ಸ್ಥಳಗಳಲ್ಲಿ ಶೋಧ ನಡೆಸಿದ್ದು, 15 ಜನರನ್ನು ಬಂಧಿಸಿದೆ.
ಚೆನ್ನೈ, ತಿರುಚಿರಾಪಳ್ಳಿ, ಮಧುರೈ, ತಿರುನೆಲ್ವೇಲಿ ಮತ್ತು ಕೊಯಮತ್ತೂರು ಜಿಲ್ಲೆಯ ವಿವಿಧೆಡೆ ಐಎಸ್ನೊಂದಿಗೆ ಸಂಪರ್ಕ ಹೊಂದಿರುವ ಶಂಕಿತರ ನೆಲೆಗಳ ಮೇಲೆ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಬಂಧಿತನನ್ನು ಕೊಯಮತ್ತೂರು ನಿವಾಸಿ ತಹನಾಸೀರ್ ಎಂದು ಗುರುತಿಸಲಾಗಿದೆ.
‘ಕೊಯಮತ್ತೂರಿನ ಉಕ್ಕಡಂನ ಈಶ್ವರನ್ ಕೋವಿಲ್ ಬೀದಿಯಲ್ಲಿರುವ ಪುರಾತನ ಅರುಲ್ಮಿಗು ಕೊಟ್ಟೈ ಸಂಗಮೇಶ್ವರ ದೇಗುಲದ ಬಳಿ ಭಯೋತ್ಪಾದಕ ದಾಳಿ ನಡೆಸಲು ಜಮೇಶಾ ಮುಬೀನ್ ಮತ್ತು ಮೊಹಮ್ಮದ್ ತೌಫಿಕ್ ಜೊತೆ ಈತನು ಸಂಚಿನಲ್ಲಿ ಭಾಗಿಯಾಗಿದ್ದ’ ಎಂದು ಎನ್ಐಎ ಹೇಳಿದೆ.
‘ಕಚ್ಚಾಬಾಂಬ್ ಇದ್ದ ವಾಹನವನ್ನು ಜಮೇಶಾ ಚಲಾಯಿಸಿದ್ದ. ಈತನೊಂದಿಗೆ ತಹನಾಸೀರ್ ಮತ್ತು ತೌಫಿಕ್ ನಿಕಟ ಸಂಬಂಧ ಹೊಂದಿದ್ದರು’ ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಆತ್ಮಾಹುತಿ ಬಾಂಬರ್ ಎಂದು ಗುರುತಿಸಲ್ಪಟ್ಟಿದ್ದ ಶಂಕಿತ ಜಮೇಶಾ ಮುಬೀನಾ, 2022ರ ಅಕ್ಟೋಬರ್ನಲ್ಲಿ ಕಾರ್ನಲ್ಲಿ ಕಚ್ಚಾಬಾಂಬ್ ಸಾಗಿಸುವಾಗ ಸ್ಫೋಟಗೊಂಡು ಮೃತಪಟ್ಟಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.