ADVERTISEMENT

ಶಿಲಾನ್ಯಾಸವಲ್ಲ, ಪೂರ್ಣ ಅನುಷ್ಠಾನ ಅಭಿವೃದ್ಧಿಯ ಹೆಗ್ಗುರುತು: ನಿರ್ಮಲಾ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 16:19 IST
Last Updated 14 ಮಾರ್ಚ್ 2024, 16:19 IST
ನಿರ್ಮಲಾ ಸೀತಾರಾಮನ್‌
ನಿರ್ಮಲಾ ಸೀತಾರಾಮನ್‌   

ಗುವಾಹಟಿ : ‘ಶಿಲಾನ್ಯಾಸ ನಡೆದ ಯೋಜನೆಗಳನ್ನು ಪೂರ್ಣಗೊಳಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಮಾದರಿಯ ಹೆಗ್ಗುರುತು’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಐಐಟಿ ಗುಜರಾತ್ ಗುರುವಾರ ಆಯೋಜಿಸಿದ್ದ ‘ವಿಕಸಿತ ಭಾರತ ರಾಯಭಾರ ಕ್ಯಾಂಪಸ್ ಚರ್ಚೆ’ಯಲ್ಲಿ ಭಾಗವಹಿಸಿದ್ದ ಅವರು, ‘2014ಕ್ಕೆ ಮುನ್ನ ಶಿಲಾನ್ಯಾಸ ನಂತರವು ಹಲವು ಯೋಜನೆಗಳು ಪೂರ್ಣವಾಗುತ್ತಿರಲಿಲ್ಲ’ ಎಂದರು.

‘ಯೋಜನೆಗಳ ಅನುಷ್ಠಾನದಲ್ಲಿ ಆಗುತ್ತಿದ್ದ ವಿಳಂಬವು ದೇಶದ ವರ್ಚಸ್ಸಿನ ಮೇಲೂ ನಕಾರಾತ್ಮಕವಾದ ಪರಿಣಾಮ ಬೀರುತ್ತಿತ್ತು. ಈಗ ಪ್ರಧಾನಿ ಅವರಿಗೆ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸುವುದಷ್ಟೇ ಅಲ್ಲ, ಪೂರ್ಣಗೊಳಿಸುವುದರಲ್ಲಿ ವಿಶ್ವಾಸವಿದೆ. ಈಶಾನ್ಯ ರಾಜ್ಯಗಳಿಗೂ ಈ ಚಿಂತನೆಯಿಂದ ನೆರವಾಗಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಅವರು ಈಶಾನ್ಯ ರಾಜ್ಯಗಳಿಗೆ 65 ಬಾರಿ, ಇತರೆ ಕೇಂದ್ರ ಸಚಿವರು 850 ಬಾರಿ ಭೇಟಿ ನೀಡಿದ್ದಾರೆ. ಇದು, ಈ ವಲಯಕ್ಕೆ ಸರ್ಕಾರ ನೀಡಿರುವ ಆದ್ಯತೆಯನ್ನು ಬಿಂಬಿಸಲಿದೆ’ ಎಂದು ತಿಳಿಸಿದರು.

ಈಶಾನ್ಯ ವಲಯವನ್ನು ಅಭಿವೃದ್ಧಿ ಹಾಗೂ ಪ್ರಗತಿಯ ಎಂಜಿನ್‌ ಆಗಿ ರೂಪಿಸಲು ಕಳೆದ ಒಂದು ದಶಕದಲ್ಲಿ ಬಿಜೆಪಿಯು ಕೈಗೊಂಡಿರುವ ಹಲವು ಕಾರ್ಯಕ್ರಮಗಳನ್ನು ಸಚಿವೆ ಉಲ್ಲೇಖಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.