ಹೈದರಾಬಾದ್: ತೆಲಂಗಾಣದಲ್ಲಿ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕನಿಷ್ಠ ಐವರು ಸಂಪುಟ ಸಚಿವರು ಮತ್ತು ಕಾಂಗ್ರೆಸ್ನ ಕೆಲ ಶಾಸಕರು ಬಿಜೆಪಿಯ ಕೇಂದ್ರ ನಾಯಕರೊಂದಿಗೆ ಸಂಪರ್ಕದಲ್ಲಿದ್ದು, ಮನಸ್ಸು ಮಾಡಿದರೆ 48 ಗಂಟೆಗಳಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸಬಹುದು ಎಂದು ರಾಜ್ಯದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಅಲ್ಲೆಟಿ ಮಹೇಂದರ್ ರೆಡ್ಡಿ ಶನಿವಾರ ಹೇಳಿದ್ದಾರೆ.
ರಸ್ತೆ ಮತ್ತು ಕಟ್ಟಡ ಸಚಿವ ಕೋಮಟಿರೆಡ್ಡಿ ವೆಂಕಟರೆಡ್ಡಿ ಅವರು ತೆಲಂಗಾಣದ ‘ಏಕನಾಥ ಶಿಂದೆ’ ಆಗುವ ಮತ್ತು ಬಿಜೆಪಿ ಸೇರುವ ಇಂಗಿತವನ್ನು ಈಗಾಗಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಬಳಿ ವ್ಯಕ್ತಪಡಿಸಿದ್ದಾರೆ. ಆದರೆ ಇದಕ್ಕೆ ಗಡ್ಕರಿ ಅವರು ಸಮ್ಮತಿಸಿಲ್ಲ ಎಂದು ಮಹೇಂದರ್ ರೆಡ್ಡಿ ತಿಳಿಸಿದ್ದಾರೆ.
‘ಬಿಜೆಪಿಯು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿರುವ ಪಕ್ಷ. ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸುವುದರಲ್ಲಿ ಅದು ನಂಬಿಕೆ ಹೊಂದಿಲ್ಲ’ ಎಂದು ಅವರು ಹೇಳಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ವೆಂಕಟರೆಡ್ಡಿ ಅವರು, ‘ತೆಲಂಗಾಣದಲ್ಲಿ ಬಿಜೆಪಿಯ ಎಂಟು ಶಾಸಕರು ಕಾಂಗ್ರೆಸ್ನೊಂದಿಗೆ ಸಂಪರ್ಕದಲ್ಲಿದ್ದು, ಪಕ್ಷ ಸೇರಲು ಸಿದ್ಧರಾಗಿದ್ದಾರೆ’ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಮಹೇಂದರ್ ರೆಡ್ಡಿ ಪ್ರತಿಕ್ರಿಯೆ ಬಂದಿದೆ.
ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ತೆಲಂಗಾಣದಿಂದ ಹಣ ಸಂಗ್ರಹಿಸಿ ದೆಹಲಿಗೆ ರವಾನಿಸುತ್ತಿದ್ದಾರೆ ಎಂದೂ ಅವರು ದೂರಿದ್ದಾರೆ.
ಪಕ್ಷಾಂತರ ಮಾಡಲು ಮುಂದಾಗುತ್ತಿರುವ ಬಿಆರ್ಎಸ್ ನಾಯಕರು ಮತ್ತು ಚುನಾಯಿತ ಪ್ರತಿನಿಧಿಗಳನ್ನು ಓಲೈಸುವಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ನಡೆದಿದೆ. ಇವುಗಳ ನಡುವೆಯೇ ಮಹೇಂದರ್ ರೆಡ್ಡಿ ಅವರಿಂದ ಈ ಹೇಳಿಕೆಗಳು ಬಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.