ADVERTISEMENT

ಕಾಂಗ್ರೆಸ್ ಪಕ್ಷ ಸತ್ಯಕ್ಕೆ ಅಂಜಬಾರದು: ಬಿಜೆಪಿ

ಪಿಟಿಐ
Published 17 ಜುಲೈ 2024, 15:33 IST
Last Updated 17 ಜುಲೈ 2024, 15:33 IST
ಅಮಿತ್ ಮಾಳವೀಯ
ಅಮಿತ್ ಮಾಳವೀಯ   

ನವದೆಹಲಿ: ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹತ್ಯೆ ಕುರಿತು ತನ್ನ ಐ.ಟಿ. ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಆಡಿದ ಮಾತುಗಳನ್ನು ಬಿಜೆಪಿ ಬುಧವಾರ ಸಮರ್ಥಿಸಿಕೊಂಡಿದೆ. ಕಾಂಗ್ರೆಸ್ ಪಕ್ಷವು ಸತ್ಯಕ್ಕೆ ಅಂಜಬಾರದು ಎಂದು ಬಿಜೆಪಿ ಹೇಳಿದೆ.

ಇಂದಿರಾ ಮತ್ತು ರಾಜೀವ್ ಅವರು ಕೈಗೊಂಡ ರಾಜಕೀಯ ತೀರ್ಮಾನಗಳ ಪರಿಣಾಮವಾಗಿ ಅವರ ಹತ್ಯೆ ಆಯಿತು ಎಂದು ಮಾಳವೀಯ ಹೇಳಿದ್ದರು. ಈ ಮಾತು ಕಾಂಗ್ರೆಸ್ ಪಕ್ಷವನ್ನು ಕೆರಳಿಸಿತ್ತು. ಮಾಳವೀಯ ಅವರನ್ನು ಐ.ಟಿ. ವಿಭಾಗದ ಮುಖ್ಯಸ್ಥ ಹುದ್ದೆಯಿಂದ ತೆಗೆಯಬೇಕು ಹಾಗೂ ಬಿಜೆಪಿಯು ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತ್ತು.

‘ಸತ್ಯವು ಸತ್ಯವಾಗಿಯೇ ಇರುತ್ತದೆ... ಕಾಂಗ್ರೆಸ್ ಹಾಗೂ ಅದರ ನಾಯಕರು ಏನು ಮಾಡಿದ್ದರು ಎಂಬುದು ಜನರಿಗೆ ಗೊತ್ತಾಗಬೇಕು’ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಗೌತಮ್ ದುಷ್ಯಂತ್ ಹೇಳಿದರು.

ADVERTISEMENT

‘ಅವರು ತುರ್ತು ಪರಿಸ್ಥಿತಿ ಹೇರಿದರು, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಹತ್ಯೆ ಮಾಡಿದರು. ಪ್ರಧಾನಿಯಾಗಲು ಜವಾಹರಲಾಲ್ ನೆಹರೂ ಅವರು ದೇಶದ ವಿಭಜನೆಯ ನೇತೃತ್ವ ವಹಿಸಿದರು. ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡರು’ ಎಂದು ದುಷ್ಯಂತ್ ಆರೋಪಿಸಿದರು.

ದೇಶದ ಜನರಿಗೆ ದೇಶದ ಇತಿಹಾಸ ಗೊತ್ತಿರಬೇಕು, ಇತಿಹಾಸವನ್ನು ಹತ್ತಿಕ್ಕಲು ಕಾಂಗ್ರೆಸ್ ಪಕ್ಷವು ಯಾವಾಗಿನಿಂದಲೂ ಯತ್ನಿಸಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.