ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿಯ (ಜೆಕೆಪಿಸಿಸಿ) ಹಂಗಾಮಿ ಕಾರ್ಯಾಧ್ಯಕ್ಷರನ್ನಾಗಿ ಎಂ.ಕೆ. ಭಾರದ್ವಾಜ್ ಮತ್ತು ಭಾನು ಮಹಾಜನ್ ಅವರನ್ನು ಎಐಸಿಸಿ ಶನಿವಾರ ನೇಮಕ ಮಾಡಿದೆ.
ವಿಧಾನಸಭೆಗೆ ಚುನಾವಣೆ ನಡುವೆಯೇ ಈ ಕ್ರಮ ಕೈಗೊಂಡಿದೆ.
ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾರಧ್ವಾಜ್ ಮತ್ತು ಮಹಾಜನ್ ಅವರನ್ನು ಜೆಕೆಪಿಸಿಸಿ ಹಂಗಾಮಿ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಕಾಂಗ್ರೆಸ್ ಪ್ರಕಟಿಸಿದೆ.
ಜೆಕೆಪಿಸಿಸಿ ಅಧ್ಯಕ್ಷರನ್ನಾಗಿ ತಾರಿಕ್ ಹಮೀದ್ ಕರ್ರ ಅವರನ್ನು ಇದೇ ಆಗಸ್ಟ್ನಲ್ಲಿ ನೇಮಿಸಲಾಗಿತ್ತು.
ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ಮೊದಲ ಚುನಾವಣೆ
ಸಂವಿಧಾನದ 370 ವಿಧಿ ಅಡಿಯಲ್ಲಿ ಕಲ್ಪಿಸಲಾಗಿದ್ದ 'ವಿಶೇಷ ಸ್ಥಾನಮಾನ'ವನ್ನು ಕೇಂದ್ರ ಸರ್ಕಾರ ಹಿಂಪಡೆದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ನಡೆಯುತ್ತಿದೆ.
2019ರ ಆಗಸ್ಟ್ 5ರಂದು 'ವಿಶೇಷ ಸ್ಥಾನಮಾನ' ಹಿಂಪಡೆದಿದ್ದ ಕೇಂದ್ರ, ಅದೇ ದಿನ, ರಾಜ್ಯವನ್ನು ವಿಭಜಿಸಿತ್ತು. ಲಡಾಖ್, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಗಳನ್ನು ಘೋಷಿಸಿತ್ತು.
90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಮೂರು ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಸೆಪ್ಟೆಂಬರ್ 18ರಂದು ಮೊದಲ ಹಂತದಲ್ಲಿ 24 ಕ್ಷೇತ್ರಗಳಿಗೆ ಮತದಾನವಾಗಿದೆ. ಸೆಪ್ಟೆಂಬರ್ 25ರಂದು ಎರಡನೇ ಹಂತದಲ್ಲಿ 26 ಕ್ಷೇತ್ರಗಳಿಗೆ ಮತ್ತು ಅಕ್ಟೋಬರ್ 1ರಂದು ಮೂರನೇ ಹಂತದದಲ್ಲಿ 40 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಅಕ್ಟೋಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.