ADVERTISEMENT

ಕಾಂಗ್ರೆಸ್ ನಗರ ನಕ್ಸಲರ ವಕ್ತಾರ: ಜೆ.ಪಿ ನಡ್ಡಾ ಟೀಕೆ

ಪಿಟಿಐ
Published 26 ಸೆಪ್ಟೆಂಬರ್ 2024, 9:44 IST
Last Updated 26 ಸೆಪ್ಟೆಂಬರ್ 2024, 9:44 IST
ಜೆ.ಪಿ. ನಡ್ಡಾ
ಜೆ.ಪಿ. ನಡ್ಡಾ   

ಭುವನೇಶ್ವರ: ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವರೂ ಆಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ‘ನಗರ ನಕ್ಸಲರ ವಕ್ತಾರ’ ಎಂದು ಟೀಕಿಸಿದ್ದಾರೆ.

ಒಡಿಶಾದಲ್ಲಿ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ, ಬುದ್ಧಿಜೀವಿಗಳನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.

‘ಕಾಂಗ್ರೆಸ್ ನಗರ ನಕ್ಸಲರ ವಕ್ತಾರನಂತಾಗಿದೆ. ಅದು ದೇಶದ ವಿನಾಶಕಾರಿ ಶಕ್ತಿಗಳಿಗೆ ಬೆಂಬಲ ನೀಡುತ್ತಿದೆ’ ಎಂದು ಹೇಳಿದ್ದಾರೆ.

ADVERTISEMENT

ಸಂವಿಧಾನದ 370ನೇ ಪರಿಚ್ಛೇದ ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದತಿ ಹಾಗೂ ತ್ರಿವಳಿ ತಲಾಖ್ ಬಗ್ಗೆ ಕಾಂಗ್ರೆಸ್‌ನ ನಿಲುವನ್ನೂ ಅವರು ಟೀಕಿಸಿದ್ದಾರೆ.

‘ಕಾಂಗ್ರೆಸ್ ಭಿನ್ನಮತದಿಂದ ಕೆಲಸ ಮಾಡಿದರೆ, ಬಿಜೆಪಿ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಿಂದಾಗಿ ನಾವು ಸಬ್‌ ಕಾ ಸಾಥ್‌, ಸಬ್‌ ಕಾ ವಿಶ್ವಾಸ್, ಸಬ್‌ ಕಾ ಪ್ರಯಾಸ್‌ ಕಡೆಗೆ ಸಾಗುತ್ತಿದ್ದೇವೆ’ ಎಂದು ನಡ್ಡಾ ನುಡಿದಿದ್ದಾರೆ.

ಪ್ರಜಾತಾಂತ್ರಿಕವಾಗಿ ಕೆಲಸ ಮಾಡುವ ಪಕ್ಷ ಬಿಜೆಪಿಯೊಂದೇ ಎಂದು ಸಮರ್ಥಿಸಿಕೊಂಡ ಅವರು, ‘ಬಿಜೆಪಿ ಒಂದು ಸಿದ್ಧಾಂತ ಪರ ಪಕ್ಷವಾಗಿದ್ದು, ಸಮರ್ಪಿತ ಕಾರ್ಯಕರ್ತರು ಮತ್ತು ಅತ್ಯಧಿಕ ಜನಮನ್ನಣೆ ಹೊಂದಿದೆ’ ಎಂದು ಹೇಳಿದ್ದಾರೆ.

ಪಕ್ಷದ ರಚನೆಯು ಒಬ್ಬ ಕಾರ್ಯಕರ್ತ ಬೇರು ಮಟ್ಟದಿಂದ ನಾಯಕನಾಗಿ ಬೆಳೆಯಲು ಸಾಧ್ಯವಾಗುವಂತೆ ಮಾಡುತ್ತದೆ. ಬಿಜೆಪಿಯಲ್ಲಿ, ನಾಯಕನು ವಿಶೇಷ ಹಕ್ಕಿನಿಂದ ಹುಟ್ಟುವುದಿಲ್ಲ. ಬದಲಾಗಿ, ಆತ ಸಮರ್ಪಣೆಯಿಂದ ಮೇಲಕ್ಕೆ ಏರಿದ ಪಕ್ಷದ ಕಾರ್ಯಕರ್ತನಾಗಿರುತ್ತಾನೆ ಎಂದು ನಡ್ಡಾ ಪ್ರತಿಪಾದಿಸಿದ್ದಾರೆ.

‍ಸದಸ್ಯತ್ವ ಅಭಿಯಾನ ಪ್ರಾರಂಭವಾದ ಬಳಿಕ ಈವರೆಗೂ 18 ಕೋಟಿ ಮಂದಿ ಪಕ್ಷದ ಸದಸ್ಯತ್ವ ಪಡೆದಿದ್ದಾರೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.