ನವದೆಹಲಿ: ಜನಾಂಗೀಯ ಕಲಹದಿಂದ ನಲುಗುತ್ತಿರುವ ಮಣಿಪರದ ಜನರ ನೋವು ನಿವಾರಿಸುವ ಮಾರ್ಗಗಳ ಕುರಿತು ಚರ್ಚಿಸಲು ಕಾಂಗ್ರೆಸ್ ಪಕ್ಷದ ಮುಖಂಡರು ಸೋಮವಾರ ಮಣಿಪುರ ಕಾಂಗ್ರೆಸ್ ಸಮಿತಿಯ ನಾಯಕರ ಜತೆ ಸಭೆ ನಡೆಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಸಂಸದ ರಾಹುಲ್ ಗಾಂಧಿ ಸಭೆಯಲ್ಲಿ ಪಾಲ್ಗೊಂಡಿದ್ದರು.
‘ಲೋಕಸಭಾ ಚುನಾವಣೆಯಲ್ಲಿ ಮಣಿಪುರದ ಜನ ಸಹಾನುಭೂತಿ, ಶಾಂತಿ, ಸೌಹಾರ್ದಕ್ಕಾಗಿ ಮತ ಹಾಕಿದ್ದಾರೆ. ಮಣಿಪುರದ ಜನರ ಬಗ್ಗೆ ನಿರಾಸಕ್ತಿ ತಳೆದಿದ್ದ ಪ್ರಧಾನಿ ಮೋದಿ ಅವರನ್ನು ಇಲ್ಲಿನ ಮತದಾರರು ತಿರಸ್ಕರಿಸಿದ್ದಾರೆ. ರಾಜ್ಯದಲ್ಲಿರುವ ಬಿಜೆಪಿ ಸರ್ಕಾರವು ಹಿಂಸಾಚಾರವನ್ನು ತಡೆಯುವಲ್ಲಿ ವಿಫಲವಾದ್ದರಿಂದ, ಸಹಸ್ರಾರು ಜನರು ಸಂಕಟ ಅನುಭವಿಸುತ್ತಿದ್ದಾರೆ’ ಎಂದು ಖರ್ಗೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಮಣಿಪುರದ ಜನರ ನೋವನ್ನು ನಿವಾರಿಸುವ ನಿಟ್ಟಿನಲ್ಲಿನ ವಿವಿಧ ಮಾರ್ಗಗಳ ಕುರಿತು ನಾವು ಮಣಿಪುರದ ಕಾಂಗ್ರೆಸ್ ನಾಯಕರ ಜತೆ ಮಾತುಕತೆ ನಡೆಸಿದ್ದೇವೆ’ ಎಂದು ಅವರು ಹೇಳಿದ್ದಾರೆ.
‘ನಮ್ಮ ಪಕ್ಷದ ಹೈಕಮಾಂಡ್ ಮಣಿಪುರದ ಜತೆಗಾಗಿ ಬದ್ಧತೆಯನ್ನು ವ್ಯಕ್ತಪಡಿಸಿದೆ. ಲೋಕಸಭೆಯಲ್ಲಿ ಮಣಿಪುರಕ್ಕಾಗಿ ಮಾತನಾಡಲು ನಮ್ಮ ಇಬ್ಬರೂ ಸಂಸದರಿಗೆ ಪಕ್ಷ ಸಮಯ ನೀಡಿದೆ’ ಎಂದು ಮಣಿಪುರದ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೀಶಮ್ ಮೇಘಚಂದ್ರ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.