ನವದೆಹಲಿ: ‘ಕಡಿಮೆ ಸದಸ್ಯ ಬಲದ ನ್ಯಾಯಪೀಠಗಳು ಸಂವಿಧಾನ ಪೀಠದ ತೀರ್ಪುಗಳಿಗೆ ಬದ್ಧವಾಗಿರಬೇಕು’ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಹರಿಯಾಣದ ಗ್ರಾಮಗಳಲ್ಲಿ ಹಾಡಿಗಳ ನಿವಾಸಿಗಳು ಒಟ್ಟಾಗಿ ಬಳಸುತ್ತಿರುವ ಭೂಮಿಗೆ ಸಂಬಂಧಿಸಿದಂತೆ ಈ ಹಿಂದೆ 2022ರ ಏಪ್ರಿಲ್ನಲ್ಲಿ ನೀಡಿದ್ದ ತೀರ್ಪು ಉಲ್ಲೇಖಿಸಿ ಸುಪ್ರೀಂ ಕೋರ್ಟ್ ಈ ನಿರ್ದೇಶನ ನೀಡಿದೆ.
ಹರಿಯಾಣದ ಕಾನೂನು ಪ್ರಕಾರ, ಗರಿಷ್ಠ ಮಿತಿಯೊಳಗಿನ ಪ್ರಮಾಣದಲ್ಲಿ ಜಮೀನು ಹೊಂದಿದ್ದವರಿಂದ ವಶಕ್ಕೆ ಪಡೆದ ಜಮೀನಿನ ಮೇಲೆ ಗ್ರಾಮ ಪಂಚಾಯಿತಿಯು ಮಾಲೀಕತ್ವದ ಹಕ್ಕು ಸಾಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ 2022ರ ಏಪ್ರಿಲ್ 7ರಂದು ನೀಡಿದ್ದ ಆದೇಶದಲ್ಲಿ ಹೇಳಿತ್ತು.
ವಶಕ್ಕೆ ಪಡೆದ ಭೂಮಿಯನ್ನು ಪಂಚಾಯಿತಿಗಳು ನಿರ್ವಹಣೆ ಹಾಗೂ ನಿಯಂತ್ರಣ ಮಾಡಬಹುದು. ಆದರೆ, ಅವುಗಳ ಮೇಲೆ ಹಕ್ಕು ಪ್ರತಿಪಾದಿಸಲಾಗದು ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ತಿಳಿಸಿತ್ತು.
ಹರಿಯಾಣದ ಗ್ರಾಮಗಳ ಸಾಮಾನ್ಯ ಭೂಮಿ (ನಿಯಂತ್ರಣ) ಕಾಯ್ದೆ 1961ರ ಸೆಕ್ಷನ್ 2 (ಜಿ)ಯ ಉಪ ಸೆಕ್ಷನ್ 6ರ ಸಿಂಧುತ್ವ ಕುರಿತು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ಪೂರ್ಣಪೀಠದ ತೀರ್ಪು ಪ್ರಶ್ನಿಸಿ, ಸಲ್ಲಿಸಲಾಗಿದ್ದ ವಿವಿಧ ಅರ್ಜಿಗಳನನ್ನು ಇತ್ಯರ್ಥಪಡಿಸಿದ ಸುಪ್ರೀಂ ಕೋರ್ಟ್ ಈ ನಿರ್ದೇಶನ ನೀಡಿದೆ.
ಸಂವಿಧಾನ ಪೀಠದ ತೀರ್ಪುಗಳಿಗೆ ಕೆಳಹಂತದ ಪೀಠಗಳು ಬದ್ಧವಾಗಿರುತ್ತವೆ ಎಂಬುದನ್ನು ಉಲ್ಲೇಖಿಸಲು ಯಾವುದೇ ಕಾಯ್ದೆಯ ಅಗತ್ಯವಿಲ್ಲ. ಭಗತ್ ರಾಮ್ ಪ್ರಕರಣವನ್ನು (1966ರ ತೀರ್ಪು) ಐವರು ನ್ಯಾಯಮೂರ್ತಿಗಳಿದ್ದ ಪೀಠ ಇತ್ಯರ್ಥಪಡಿಸಿದೆ. ಇಬ್ಬರು ನ್ಯಾಯಮೂರ್ತಿಗಳಿರುವ ಪೀಠವು ಸಂವಿಧಾನ ಪೀಠದ ತೀರ್ಪನ್ನು ತಳ್ಳಿಹಾಕಲಾಗದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು.
ಏಪ್ರಿಲ್ 2022ರಲ್ಲಿ ನೀಡಿದ್ದ ತೀರ್ಪಿನ ಮರುಪರಿಶೀಲನೆ ಕೋರಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಇತ್ಯರ್ಥಪಡಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.