ರತಲಾಮ್ : ಮಧ್ಯಪ್ರದೇಶದ ಜಾವರಾ ಪಟ್ಟಣದ ದೇವಾಲಯವೊಂದರ ಆವರಣದೊಳಗೆ ಕತ್ತರಿಸಿದ್ದ ಗೋವಿನ ತಲೆಯನ್ನು ಎಸೆದ ಆರೋಪದ ಮೇಲೆ ನಾಲ್ವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎನ್ಎಸ್ಎ) ಪ್ರಕರಣ ದಾಖಲಿಸಿದ್ದು, ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ಎರಡು ಬೈಕ್ಗಳಲ್ಲಿ ಬಂದ ಆರೋಪಿಗಳು ಗೋವಿನ ದೇಹದ ಭಾಗಗಳನ್ನು ದೇಗುಲದ ಆವರಣದೊಳಗೆ ಎಸೆದಿದ್ದಾರೆ. ಇದರಿಂದ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತ್ತು ಎಂದಿದ್ದಾರೆ.
ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಹಾಗೂ ಇತರ ಅಪರಾಧಗಳಿಗಾಗಿ ನಾಲ್ವರನ್ನು ಬಂಧಿಸಲಾಗಿದೆ. ಸಾಮರಸ್ಯ ಕದಡಲಿಕ್ಕಾಗಿಯೇ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಡಿಐಜಿ ಮನೋಜ್ ಕುಮಾರ್ ಸಿಂಗ್ ವರದಿಗಾರರಿಗೆ ತಿಳಿಸಿದರು.
ಸಲ್ಮಾನ್ ಮೇವತಿ, ಶಕೀರ್ ಖುರೇಷಿ, ನೌಶಾದ್ ಖುರೇಷಿ ಮತ್ತು ಶಾರುಖ್ ಸತ್ತಾರ್ ಬಂಧಿತರು. ನೌಶಾದ್ ವಿರುದ್ಧ 20 ಪ್ರಕರಣಗಳಿದ್ದು, ಒಮ್ಮೆ ಜಿಲ್ಲೆಯಿಂದ ಗಡಿಪಾರು ಮಾಡಲಾಗಿತ್ತು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಕೇಶ್ ಖಾಖಾ ಹೇಳಿದ್ದಾರೆ.
ಆರೋಪಿಗಳಿಗೆ ಸೇರಿದ ಮನೆಯ ಒತ್ತುವರಿ ಭಾಗಗಳನ್ನು ಸ್ಥಳೀಯ ಆಡಳಿತವು ನೆಲಸಮಗೊಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯ ನಂತರ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಜಾವರಾ ಬಂದ್ಗೆ ಕರೆ ನೀಡಿವೆ.
ಗೌರವ್ ಪುರಿ ಗೋಸ್ವಾಮಿ ಎಂಬಾತ ಘಟನೆಗೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.