ADVERTISEMENT

ಮಹಾರಾಷ್ಟ್ರ| ಅಂಗನವಾಡಿಯ ಮಧ್ಯಾಹ್ನದ ಊಟದಲ್ಲಿ ಸತ್ತ ಹಾವು ಪತ್ತೆ: ಪೋಷಕರ ಆರೋಪ

ಪಿಟಿಐ
Published 4 ಜುಲೈ 2024, 3:00 IST
Last Updated 4 ಜುಲೈ 2024, 3:00 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಸಾಂಗ್ಲಿ(ಮಹಾರಾಷ್ಟ್ರ): ಅಂಗನವಾಡಿಯಲ್ಲಿ ಪೊಟ್ಟಣ ಕಟ್ಟಿ ನೀಡಲಾಗಿದ್ದ ಮಧ್ಯಾಹ್ನದ ಊಟದಲ್ಲಿ ಸಣ್ಣ ಗಾತ್ರದ ಸತ್ತ ಹಾವು ಪತ್ತೆಯಾಗಿರುವ ಪ್ರಕರಣ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಜಿಲ್ಲೆಯ ಪಲು ಪ್ರದೇಶದ ಮಗುವಿನ ಪೋಷಕರೊಬ್ಬರು ಇಂತಹ ಆರೋಪ ಮಾಡಿದ್ದಾರೆ ಎಂದು ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಉಪಾಧ್ಯಕ್ಷೆ ಆನಂದಿ ಭೋಸ್ಲೆ ತಿಳಿಸಿದ್ದಾರೆ.

ADVERTISEMENT

‘6 ತಿಂಗಳಿಂದ 3 ವರ್ಷದ ಮಕ್ಕಳಿಗೆ ಮಧ್ಯಾಹ್ನದ ಊಟವನ್ನು ಪೊಟ್ಟಣದಲ್ಲಿ ಕಟ್ಟಿ ಅಂಗನವಾಡಿಯಿಂದ ಮನೆಗೆ ತಲುಪಿಸಲಾಗುತ್ತದೆ. ಪಲುವಿನ ಅಂಗನವಾಡಿ ಕಾರ್ಯಕರ್ತೆಯರು ಈ ಪೊಟ್ಟಣಗಳನ್ನು ವಿತರಣೆ ಮಾಡಿದ್ದಾರೆ. ಆದರೆ, ಈ ಪೈಕಿ ಒಂದು ಮಗುವಿನ ಪೋಷಕರು, ಆಹಾರದ ಪೊಟ್ಟಣದಲ್ಲಿ ಸಣ್ಣ ಗಾತ್ರದ ಸತ್ತ ಹಾವು ಸಿಕ್ಕಿರುವುದಾಗಿ ದೂರಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ.

ಈ ಸಂಬಂಧ ಅಂಗನವಾಡಿಯ ಮಹಿಳಾ ಸಿಬ್ಬಂದಿಯೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಬಳಿಕ, ಸಾಂಗ್ಲಿ ಜಿಲ್ಲಾ ಪಂಚಾಯಿತಿಯ ಉಪಕಾರ್ಯನಿರ್ವಹಣಾಧಿಕಾರಿ ಸಂದೀಪ್ ಯಾದವ್ ಮತ್ತು ಆಹಾರ ಸುರಕ್ಷತಾ ಸಮಿತಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನಿಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ಯಾದವ್ ಅವರನ್ನು ಹಲವು ಬಾರಿ ಸಂಪರ್ಕಿಸಿದ್ದರೂ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಪಿಟಿಐ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.