ADVERTISEMENT

ದೆಹಲಿ ಕೋಚಿಂಗ್‌ ಸೆಂಟರ್‌ಗೆ ನೀರು ನುಗ್ಗಿ ಮೂವರು ಸಾವು: ಮಾಲೀಕ, ನಿರ್ವಾಹಕ ಸೆರೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 16:08 IST
Last Updated 28 ಜುಲೈ 2024, 16:08 IST
ದೆಹಲಿಯ ಕರೋಲ್‌ ಬಾಗ್ ಮೆಟ್ರೊ ನಿಲ್ದಾಣದ ಬಳಿ ವಿದ್ಯಾರ್ಥಿಗಳು ಭಾನುವಾರ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ
ದೆಹಲಿಯ ಕರೋಲ್‌ ಬಾಗ್ ಮೆಟ್ರೊ ನಿಲ್ದಾಣದ ಬಳಿ ವಿದ್ಯಾರ್ಥಿಗಳು ಭಾನುವಾರ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ   

ನವದೆಹಲಿ: ಕೋಚಿಂಗ್‌ ಸೆಂಟರ್‌ನ ನೆಲಮಹಡಿಗೆ ಮಳೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿರುವುದಕ್ಕೆ  ಸಂಬಂಧಿಸಿದಂತೆ ದೆಹಲಿ ಪೊಲೀಸರು ತರಬೇತಿ ಕೇಂದ್ರದ ಮಾಲೀಕ ಹಾಗೂ ನಿರ್ವಾಹಕರನ್ನು ಭಾನುವಾರ ಬಂಧಿಸಿದ್ದಾರೆ.

ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರಿಂದ ಸ್ಥಳದಲ್ಲಿ ಬಿಗುವಿನ ಸ್ಥಿತಿ ನಿರ್ಮಾಣವಾಯಿತು. ಈ ದುರಂತವು ಬಿಜೆಪಿ ಮತ್ತು ಎಎಪಿ ನಾಯಕರ ನಡುವೆ ವಾಕ್ಸಮರಕ್ಕೂ ಕಾರಣವಾಗಿದೆ.

ಶನಿವಾರ ಸಂಜೆ ಸುರಿದ ಭಾರಿ ಮಳೆಗೆ ದೆಹಲಿಯ ಓಲ್ಡ್‌ ರಾಜೇಂದ್ರ ನಗರದಲ್ಲಿರುವ ‘ರಾವ್ಸ್ ಐಎಎಸ್‌ ಸ್ಟಡಿ ಸರ್ಕಲ್‌’ ಕಟ್ಟಡದ ನೆಲಮಹಡಿಗೆ ನೀರು ನುಗ್ಗಿದೆ. ಈ ವೇಳೆ ಮೂವರು ಹೊರಬರಲಾರದೆ ಮುಳುಗಿ ಮೃತಪಟ್ಟಿದ್ದಾರೆ. 

ADVERTISEMENT

ಎನ್‌ಡಿಆರ್‌ಎಫ್ ಸಿಬ್ಬಂದಿ, ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ನಡೆಸಿದ ಕಾರ್ಯಾಚರಣೆ ವೇಳೆ ಮೂರು ಮೃತದೇಹಗಳು ದೊರೆತಿವೆ. ‘ನೆಲಮಹಡಿ ಕೆಲವೇ ನಿಮಿಷಗಳಲ್ಲಿ ಮುಳುಗಿದ್ದರಿಂದ ಕೆಲವರಿಗೆ ಹೊರಬರಲು ಸಾಧ್ಯವಾಗಲಿಲ್ಲ’ ಎಂದು ಡಿಸಿಪಿ (ಕೇಂದ್ರ ದೆಹಲಿ) ಎಂ. ಹರ್ಷವರ್ಧನ ತಿಳಿಸಿದರು. 

ತನಿಖೆಗೆ ತಂಡ ರಚನೆ: ‘ಘಟನೆಗೆ ಸಂಬಂಧಿಸಿದಂತೆ ಕೋಚಿಂಗ್‌ ಸೆಂಟರ್‌ನ ಮಾಲೀಕ ಅಭಿಷೇಕ್‌ ಗುಪ್ತಾ ಮತ್ತು ನಿರ್ವಾಹಕ ದೇಶಪಾಲ್‌ ಸಿಂಗ್ ಅವರನ್ನು ಬಂಧಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ತನಿಖೆಗೆ ಹಲವು ತಂಡಗಳನ್ನು ರಚಿಸಲಾಗಿದೆ. ಕಟ್ಟಡ ಮತ್ತು ನೆಲಮಹಡಿಗೆ ಸಂಬಂಧಿಸಿ ವರದಿ ನೀಡುವಂತೆ ಅಗ್ನಿಶಾಮಕ ದಳಕ್ಕೆ ಸೂಚಿಸಲಾಗಿದೆ. ತಳಮಹಡಿಯು ನೆಲಮಟ್ಟದಿಂದ ಎಂಟು ಅಡಿಗಳಷ್ಟು ಕೆಳಕ್ಕೆ ಇದ್ದು, ನೀರು ನುಗ್ಗುವ ವೇಳೆ ಅಲ್ಲಿ 18 ವಿದ್ಯಾರ್ಥಿಗಳಿದ್ದರು’ ಎಂದು ತಿಳಿಸಿದರು. 

ಸ್ಟೋರ್‌ ರೂಂ ಬದಲು ಗ್ರಂಥಾಲಯ: ಕೋಚಿಂಗ್ ಸೆಂಟರ್‌ನ ನೆಲಮಹಡಿಯನ್ನು ಸ್ಟೋರ್ ರೂಂ (ಉಗ್ರಾಣ) ಆಗಿ ಬಳಸಲು ಮಾತ್ರ ಅನುಮತಿ ನೀಡಲಾಗಿತ್ತು. ಆದರೆ ಅದನ್ನು ಗ್ರಂಥಾಲಯವಾಗಿ ಬಳಸಿ, ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನೆಲಮಹಡಿಯನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವ ಎಲ್ಲ ಕೋಚಿಂಗ್‌ ಸೆಂಟರ್‌ಗಳು ಮತ್ತು ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೆಹಲಿ ಮೇಯರ್‌ ಶೆಲ್ಲಿ ಒಬೆರಾಯ್‌ ಅವರು ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದಾರೆ. 

ತನಿಖೆಗೆ ಸಹಕಾರ: ‘ಸಮರ್ಪಣೆ ಮತ್ತು ಬದ್ಧತೆಯಿಂದ ದೇಶ ಸೇವೆಗೆ ತಯಾರಿ ನಡೆಸುತ್ತಿದ್ದ ಮೂವರ ಸಾವಿನಿಂದ ತೀವ್ರ ದುಃಖವಾಗಿದೆ. ಘಟನೆಯ ಕುರಿತ ತನಿಖೆಗೆ ಎಲ್ಲ ಸಹಕಾರ ನೀಡುತ್ತೇವೆ’ ಎಂದು ತರಬೇತಿ ಕೇಂದ್ರವು ಪ್ರಕಟಣೆಯಲ್ಲಿ ತಿಳಿಸಿದೆ.

ಇದು ಕೊಲೆಯೇ ಹೊರತು ದುರ್ಘಟನೆಯಲ್ಲ. ಎಎಪಿ ಆಡಳಿತದಲ್ಲಿನ ಭ್ರಷ್ಟಾಚಾರವೇ ಇದಕ್ಕೆ ಕಾರಣ. ಮೃತರ ಕುಟುಂಬಕ್ಕೆ ತಲಾ ₹3 ಕೋಟಿ ಪರಿಹಾರ ನೀಡಬೇಕು
ವೀರೇಂದ್ರ ಸಚ್‌ದೇವ್ ದೆಹಲಿ ಬಿಜೆಪಿ ಅಧ್ಯಕ್ಷ
ಬಿಜೆಪಿ ತನ್ನ 15 ವರ್ಷಗಳ ಆಡಳಿತದಲ್ಲಿ ನಗರದ ಚರಂಡಿ ವ್ಯವಸ್ಥೆಯನ್ನು ಕಡೆಗಣಿಸಿತು. ರಾಜಕೀಯ ಕೆಸರೆರಚಾಟದ ಬದಲು ಘಟನೆ ಬಗ್ಗೆ ಪಾರದರ್ಶಕ ತನಿಖೆ ನಡೆಯಲಿ
ದುರ್ಗೇಶ್‌ ಪಾಠಕ್ ಎಎಪಿ ಶಾಸಕ 

ಯುಪಿಎಸ್‌ಸಿ ಆಕಾಂಕ್ಷಿಗಳಾಗಿದ್ದರು...ಶನಿವಾರ ನಡೆದ ದುರ್ಘಟನೆಯಲ್ಲಿ ಮೃತಪಟ್ಟವರನ್ನು ಕೇರಳದ ಎರ್ನಾಕುಳಂ ಜಿಲ್ಲೆಯ ನವೀನ್‌ ಡೆಲ್ವಿನ್ (29) ತೆಲಂಗಾಣದಲ್ಲಿ ನೆಲೆಸಿರುವ ಬಿಹಾರದ ಔರಂಗಾಬಾದ್‌ನ ತಾನ್ಯಾ ಸೋನಿ (21) ಮತ್ತು ಉತ್ತರ ಪ್ರದೇಶದ ಶ್ರೇಯಾ ಯಾದವ್‌ ಎಂದು ಗುರುತಿಸಲಾಗಿದೆ. ಈ ಮೂವರೂ ನಾಗರಿಕ ಸೇವಾ ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದರು. ತಾನ್ಯಾ ಅವರು ದೆಹಲಿ ವಿಶ್ವವಿದ್ಯಾಲಯದ ಮಹಾರಾಜಾ ಅಗ್ರಸೇನ್‌ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು ಒಂದೂವರೆ ತಿಂಗಳ ಹಿಂದೆಯಷ್ಟೇ ರಾವ್ಸ್ ಕೋಚಿಂಗ್ ಸೆಂಟರ್‌ಗೆ ಸೇರಿಕೊಂಡಿದ್ದರು.  ನವೀನ್‌ ಅವರು ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿ ಮಾಡುತ್ತಿದ್ದು ಕೋಚಿಂಗ್‌ ಸೆಂಟರ್‌ನಲ್ಲಿ ಎಂಟು ತಿಂಗಳಿನಿಂದ ತರಬೇತಿ ಪಡೆಯುತ್ತಿದ್ದಾರೆ. ಬಿಎಸ್‌ಪಿ (ಕೃಷಿ) ವ್ಯಾಸಂಗ ಮಾಡಿರುವ ಶ್ರೇಯಾ ಎರಡು ತಿಂಗಳ ಹಿಂದೆ ತರಬೇತಿ ಕೇಂದ್ರಕ್ಕೆ ಸೇರಿಕೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.