ADVERTISEMENT

ಪೂಜಾ ಖೇಡ್ಕರ್‌ಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ದೆಹಲಿ ನ್ಯಾಯಾಲಯ

ಪಿಟಿಐ
Published 1 ಆಗಸ್ಟ್ 2024, 12:19 IST
Last Updated 1 ಆಗಸ್ಟ್ 2024, 12:19 IST
   

ನವದೆಹಲಿ: ಸುಳ್ಳು ಮಾಹಿತಿ ನೀಡಿ ಒಬಿಸಿ ಮತ್ತು ಅಂಗವಿಕಲ ವ್ಯಕ್ತಿ (PwD) ಕೋಟಾ ಪ್ರಯೋಜನಗಳನ್ನು ಪಡೆದ ಆರೋಪ ಎದುರಿಸುತ್ತಿರುವ ಐಎಎಸ್‌ ಪ್ರೊಬೇಷನರಿ ಮಾಜಿ ಅಧಿಕಾರಿ ಪೂಜಾ ಖೇಡ್ಕರ್ ಅವರಿಗೆ ದೆಹಲಿ ನ್ಯಾಯಾಲಯ ಗುರುವಾರ ನಿರೀಕ್ಷಣಾ ಜಾಮೀನು ನಿರಾಕರಿಸಿದೆ.

ಯುಪಿಎಸ್‌ಸಿ ಅಲ್ಲಿರುವ ಯಾರಾದರೂ ಖೇಡ್ಕರ್‌ಗೆ ಸಹಾಯ ಮಾಡಿದ್ದಾರೆಯೇ? ಎಂಬುದರ ಬಗ್ಗೆ ದೆಹಲಿ ಪೊಲೀಸರು ತನಿಖೆ ಮಾಡಬೇಕು ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ದೇವೆಂದರ್ ಕುಮಾರ್ ಜಂಗಾಲ ಅವರು ಆದೇಶಿಸಿದ್ದಾರೆ.

ಒಬಿಸಿ ಮತ್ತು ಪಿಡಬ್ಲ್ಯೂಡಿ ಕೋಟಾಗಳ ಅಡಿಯಲ್ಲಿ ಅರ್ಹತೆ ಇಲ್ಲದೆ ಇನ್ಯಾರಾದರೂ ಪ್ರಯೋಜನ ಪಡೆದಿದ್ದರೆ, ಆ ಕುರಿತು ತನಿಖೆ ನಡೆಸುವಂತೆಯೂ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

ADVERTISEMENT

ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಪೂಜಾ ಖೇಡ್ಕರ್ ಅವರ ನೇಮಕಾತಿ ಆದೇಶವನ್ನು ರದ್ದುಗೊಳಿಸಿದೆ. ಅದರ ಜೊತೆಗೆ ಭವಿಷ್ಯದ ಎಲ್ಲ ಪರೀಕ್ಷೆಗಳು ಮತ್ತು ಆಯ್ಕೆಗಳಿಂದ ಅವರನ್ನು ಡಿಬಾರ್‌ ಮಾಡಿದೆ.

ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ಲೈಂಗಿಕ ಶೋಷಣೆಯ ದೂರು ಸಲ್ಲಿಸಿದ್ದಕ್ಕಾಗಿ ನನ್ನನ್ನು ಗುರಿಯಾಗಿಸಲಾಗಿದೆ. ನನ್ನನ್ನು ಬಂಧಿಸುವ ಬೆದರಿಕೆ ಇದೆ. ಹೀಗಾಗಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು ಎಂದು ಪೂಜಾ ಖೇಡ್ಕರ್‌ ಅವರು ಸಲ್ಲಿಸಿರುವ ಜಾಮೀನು ಅರ್ಜಿ ಕುರಿತ ಆದೇಶವನ್ನು ಗುರುವಾರ ಪ್ರಕಟಿಸುವುದಾಗಿ ದೆಹಲಿ ನ್ಯಾಯಾಲಯ ಆದೇಶಿಸಿತ್ತು.

ಜಾಮೀನು ಅರ್ಜಿಗೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದ ಪ್ರಾಷಿಕ್ಯೂಷನ್, ಪೂಜಾ ಖೇಡ್ಕರ್‌ ಒಂದು ಪ್ರಬಲ ವ್ಯವಸ್ಥೆಗೆ ವಂಚನೆ ಮಾಡಿದ್ದಾರೆ. ಹಾಗಾಗಿ ಅವರನ್ನು ಬಂಧಿಸಿ ವಿಚಾರಣೆ ನಡೆಸುವುದು ಸೂಕ್ತವಾಗಿದೆ ಎಂದು ವಾದಿಸಿದ್ದರು. ಅರ್ಜಿದಾರರ ಹಿನ್ನೆಲೆ ಬಲಿಷ್ಠವಾಗಿದ್ದು ಅವರಿಗೆ ಜಾಮೀನು ನೀಡಿದರೆ ಈ ಪ್ರಕರಣದ ಸಾಕ್ಷ್ಯಗಳನ್ನು ನಾಶಪಡಿಸಬಹುದು ಎಂದು ಹೇಳಿದ್ದರು.

ಪ್ರತಿವಾದ ಆಲಿಸಿದ ಹೆಚ್ಚುವರಿ ಸೆಷನ್‌ ನ್ಯಾಯಾಧೀಶ ದೇವೇಂದರ್‌ ಕುಮಾರ್‌ ಜಂಗಾಲ ಅವರು, ಆದೇಶವನ್ನು ಬುಧವಾರ ಕಾಯ್ದಿರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.