ADVERTISEMENT

ಆತಿಶಿ ಸಂಪುಟ | ನಾಲ್ವರು ಸಚಿವರು ಮುಂದುವರಿಕೆ; ದಲಿತ ನಾಯಕ ಹೊಸ ಸೇರ್ಪಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಸೆಪ್ಟೆಂಬರ್ 2024, 10:16 IST
Last Updated 19 ಸೆಪ್ಟೆಂಬರ್ 2024, 10:16 IST
ಆತಿಶಿ
ಆತಿಶಿ   

ನವದೆಹಲಿ: ನಿರ್ಗಮಿತ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಂಪುಟದಲ್ಲಿದ್ದ ನಾಲ್ಕೂ ಸಚಿವರು ನೂತನ ಸಿಎಂ ಆತಿಶಿ ಅವರ ಕ್ಯಾಬಿನೆಟ್‌ನಲ್ಲೂ ಮುಂದುವರಿಯಲಿದ್ದಾರೆ. ಅವರೊಟ್ಟಿಗೆ ದಲಿತ ಶಾಸಕ ಮುಖೇಶ್‌ ಅಹ್ಲಾವತ್‌ ಹೊಸದಾಗಿ ಸಂಪುಟ ಸೇರಲಿದ್ದಾರೆ.

ಕೇಜ್ರಿವಾಲ್‌ ಸಂಪುಟದಲ್ಲಿದ್ದ ಗೋಪಾಲ್‌ ರಾಯ್‌, ಕೈಲಾಶ್‌ ಗೆಹ್ಲೋತ್‌, ಸೌರಭ್‌ ಭಾರದ್ವಾಜ್‌ ಮತ್ತು ಇಮ್ರಾನ್‌ ಹುಸ್ಸೇನ್‌ ಅವರು ಸ್ಥಾನದಲ್ಲಿ ಮುಂದುವರಿಯಲಿದ್ದು, ಆತಿಶಿ ಅವರೊಂದಿಗೆ ಶನಿವಾರ (ಸೆ.21) ಮತ್ತೊಮ್ಮೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೆಹಲಿ ಕ್ಯಾಬಿನೆಟ್‌ನಲ್ಲಿ ಮುಖ್ಯಮಂತ್ರಿ ಸೇರಿದಂತೆ ಗರಿಷ್ಠ 7 ಸಚಿವರಿಗೆ ಅವಕಾಶವಿದೆ. ಈ ಬಾರಿ ಹೊಸದಾಗಿ ಮುಖೇಶ್‌ ಸೇರ್ಪಡೆಯಾಗುತ್ತಿರುವುದರಿಂದ ಇನ್ನೊಂದು ಸ್ಥಾನವಷ್ಟೇ ಬಾಕಿ ಉಳಿಯಲಿದೆ.

ADVERTISEMENT

ಮುಖೇಶ್‌ ಅವರು ಎಸ್‌ಸಿ ಮೀಸಲು ಕ್ಷೇತ್ರವಾದ ಸುಲ್ತಾನ್‌ಪುರ ಮಜ್ರಾದಿಂದ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ಮುಖ್ಯಮಂತ್ರಿ ಆತಿಶಿ ಅವರು ಪಂಜಾಬಿ ರಜಪೂತ್‌ ಸಮುದಾಯಕ್ಕೆ ಸೇರಿದವರು. ಉಳಿದಂತೆ ರಾಯ್‌ ಅವರು ಠಾಕೂರ್‌, ಗೆಹ್ಲೋತ್‌ ಅವರು ಜಾಟ್‌, ಭಾರದ್ವಾಜ್‌ ಅವರು ಬ್ರಾಹ್ಮಣ ಮತ್ತು ಇಮ್ರಾನ್‌ ಅವರು ಮುಸ್ಲಿಂ ಸಮುದಾಯದವರು.

'ತ‍ಪ್ಪು ಸಂದೇಶ ರವಾನೆಯಾಗಲಿದೆ' ಎಂಬ ಕಾರಣಕ್ಕೆ ಹಿರಿಯ ಸಚಿವರನ್ನು ಬದಲಿಸದಿರಲು ಪಕ್ಷದ ನಾಯಕರು ನಿರ್ಧರಿಸಿದ್ದಾರೆ ಎಂದೂ ಮೂಲಗಳು ಹೇಳಿವೆ.

ಹಾಗೆಯೇ, 2025ರ ಆರಂಭದಲ್ಲಿ ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಲಿರುವುದರಿಂದ ಅನುಭವಿಗಳು, ಹೊಸಬರು ಸೇರಿದಂತೆ ಸಮತೋಲನದಿಂದ ಕೂಡಿದ ಕ್ಯಾಬಿನೆಟ್‌ ಇರಬೇಕೆಂಬುದು ಪಕ್ಷದ ಆಶಯವಾಗಿದೆ ಎಂದೂ ಹೇಳಲಾಗಿದೆ.

ಸರ್ಕಾರ ಸದ್ಯ ಹಿಂಪಡೆದಿರುವ 'ಅಬಕಾರಿ ನೀತಿ' ಜಾರಿ ವೇಳೆ ನಡೆದಿದೆ ಎನ್ನಲಾದ ಹಣದ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಕೇಂದ್ರೀಯ ತನಿಖಾ ದಳವು (ಸಿಬಿಐ) ಕೇಜ್ರಿವಾಲ್‌ ಅವರನ್ನು ಬಂಧಿಸಿತ್ತು. ಕಳೆದ ವಾರ ಜಾಮೀನು ಪಡೆದಿರುವ ಅವರು, ಜನರು ತಮಗೆ ಮತ್ತೊಮ್ಮೆ ಅಧಿಕಾರ ನೀಡುವವರೆಗೆ ಸಿಎಂ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸಿ ರಾಜೀನಾಮೆ ನೀಡಿದ್ದರು.

ಬಳಿಕ ನಡೆದ ಎಎಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ತಮ್ಮ ಉತ್ತರಾಧಿಕಾರಿಯಾಗಿ ಆತಿಶಿ ಅವರ ಹೆಸರನ್ನು ಕೇಜ್ರಿವಾಲ್‌ ಘೋಷಿಸಿದ್ದರು. ನಿರ್ಗಮಿತ ಸಿಎಂ ನಿರ್ಧಾರವನ್ನು ಎಎಪಿಯು ಸರ್ವಾನುಮತದಿಂದ ಅಂಗೀಕರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.