ADVERTISEMENT

ಹೆಚ್ಚುವರಿ ನೀರು: ಹರಿಯಾಣಕ್ಕೆ ನಿರ್ದೇಶಿಸಲು ‘ಸುಪ್ರೀಂ’ಗೆ ದೆಹಲಿ ಸರ್ಕಾರ ಮೊರೆ

ಪಿಟಿಐ
Published 31 ಮೇ 2024, 16:38 IST
Last Updated 31 ಮೇ 2024, 16:38 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನೀರಿನ ಬಿಕ್ಕಟ್ಟು ತೀವ್ರವಾಗಿದ್ದು, ಹೆಚ್ಚುವರಿ ನೀರು ಬಿಡುಗಡೆ ಮಾಡಲು ಪಕ್ಕದ ಹರಿಯಾಣ ರಾಜ್ಯಕ್ಕೆ ನಿರ್ದೇಶನ ನೀಡುವಂತೆ ಕೋರಿ ದೆಹಲಿಯ ಎಎಪಿ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್‌ ಮೊರೆಹೋಗಿದೆ.

ಬಿಸಿಗಾಳಿಯ ಪರಿಣಾಮ ದೆಹಲಿಯಲ್ಲಿ ನೀರಿನ ಬೇಡಿಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಹೀಗಾಗಿ ಒಂದು ತಿಂಗಳವರೆಗೆ ಹೆಚ್ಚುವರಿ ನೀರು ಬಿಡುಗಡೆ ಮಾಡುವಂತೆ ಹರಿಯಾಣ ಸರ್ಕಾರಕ್ಕೆ ಸೂಚಿಸುವಂತೆ ದೆಹಲಿ ಸರ್ಕಾರ ಕೋರಿದೆ.

ದೇಶದ ರಾಜಧಾನಿಯ ಜನರ ನೀರಿನ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಕೆಲಸ ಮಾಡುವುದು ಎಲ್ಲರ ಜವಾಬ್ದಾರಿ ಆಗಿದೆ ಎಂದು ಇದೇ ವೇಳೆ ದೆಹಲಿ ಸರ್ಕಾರ ಹೇಳಿದೆ.

ADVERTISEMENT

ದೆಹಲಿಯ ಜಲ ಸಚಿವೆ ಆತಿಶಿ, ‘ದೇಶದ ರಾಜಧಾನಿ ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿದ್ದು, ದೆಹಲಿಯ ಪಾಲಿನ ನೀರನ್ನು ಹರಿಯಾಣ ಬಿಡುಗಡೆ ಮಾಡುತ್ತಿಲ್ಲ’ ಎಂದು ಆರೋಪಿಸಿದ್ದಾರೆ. 

ರಾಜಕೀಯ ಮಾಡುವ ಸಮಯವಲ್ಲ: ಕೇಜ್ರಿವಾಲ್‌

‘ಬಿಸಿಗಾಳಿಯ ತೀವ್ರತೆಯು ನೀರಿನ ಬೇಡಿಕೆಯನ್ನು ಹೆಚ್ಚಿಸಿದೆ. ಹೀಗಾಗಿ ಇದು ರಾಜಕೀಯ ನಡೆಸುವ ಸಮಯವಲ್ಲ. ಬದಲಿಗೆ ನಾವೆಲ್ಲ ಒಟ್ಟಾಗಿ ದೆಹಲಿ ಜನರ ಸಮಸ್ಯೆ ಪರಿಹರಿಸಲು ಕೈಜೋಡಿಸಬೇಕಾದ ಸಮಯ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ‘ಎಕ್ಸ್‌’ನಲ್ಲಿ ವಿನಂತಿಸಿದ್ದಾರೆ.

ಬಿಜೆಪಿಯು ಹರಿಯಾಣ ಮತ್ತು ಉತ್ತರ ಪ್ರದೇಶಗಳಲ್ಲಿನ ತನ್ನ ಸರ್ಕಾರದ ಜತೆ ಮಾತುಕತೆ ನಡೆಸಿ ದೆಹಲಿಗೆ ತಿಂಗಳವರೆಗೆ ಹೆಚ್ಚುವರಿ ನೀರು ಹರಿಸುವಂತೆ ಮಾಡಿದರೆ, ದೆಹಲಿಯ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ಕೇಂದ್ರಕ್ಕೆ ಪತ್ರ ಬರೆದ ಆತಿಶಿ: ದೆಹಲಿಯ ನೀರಿನ ಬಿಕ್ಕಟ್ಟನ್ನು ಪರಿಹರಿಸಲು ಉತ್ತರ ಪ್ರದೇಶ ಅಥವಾ ಹರಿಯಾಣದಿಂದ ನೀರನ್ನು ಬಿಡುಗಡೆ ಮಾಡಿಸುವಂತೆ ಕೋರಿ ದೆಹಲಿ ಜಲ ಸಚಿವ ಆತಿಶಿ ಅವರು ಕೇಂದ್ರದ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ಅವರಿಗೆ ಪತ್ರ ಬರೆದಿದ್ದಾರೆ.

ಹರಿಯಾಣವು ಯಮುನಾ ನದಿಗೆ ಅಗತ್ಯ ಪ್ರಮಾಣದಲ್ಲಿ ನೀರು ಹರಿಸುತ್ತಿಲ್ಲ. ಇದರಿಂದಾಗಿ ಕೆಲ ದಿನಗಳಿಂದ ವಜೀರಾಬಾದ್‌ ಬ್ಯಾರೇಜ್‌ನಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿತವಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.