ನವದೆಹಲಿ: ರಾಜಧಾನಿಯಲ್ಲಿ ತಲೆದೋರಿರುವ ನೀರಿನ ಸಮಸ್ಯೆಗೆ ಪರಿಹಾರ ಕ್ರಮಗಳನ್ನು ಚರ್ಚಿಸಲು ಜೂನ್ 5ರಂದು ಯಮುನಾ ಮೇಲ್ದಂಡೆ ನದಿ ಮಂಡಳಿಯು (ಯುವೈಆರ್ಬಿ) ಸಭೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಹಿಮಾಚಲ ಪ್ರದೇಶವು ಒದಗಿಸಿರುವ ಹೆಚ್ಚುವರಿ ನೀರನ್ನು ರಾಜಧಾನಿಗೆ ಬಿಡುಗಡೆ ಮಾಡುವಂತೆ ಹರಿಯಾಣ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ದೆಹಲಿ ಸರ್ಕಾರವು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ಸುಪ್ರಿಂ ಕೋರ್ಟ್ ಈ ಸೂಚನೆಯನ್ನು ನೀಡಿತು.
ನ್ಯಾಯಮೂರ್ತಿಗಳಾದ ಪಿ.ಕೆ.ಮಿಶ್ರಾ, ಕೆ.ವಿ.ವಿಶ್ವನಾಥನ್ ಅವರಿದ್ದ ರಜೆ ಕಾಲದ ಪೀಠವು, ಕೇಂದ್ರ, ದೆಹಲಿ, ಹರಿಯಾಣ, ಹಿಮಾಚಲ ಪ್ರದೇಶ ಸರ್ಕಾರಗಳನ್ನು ಪ್ರತಿನಿಧಿಸಿದ್ದ ವಕೀಲರು ಸಭೆ ಸೇರಲು ಸಮ್ಮತಿಸಿದ್ದಾರೆ ಎಂಬ ಅಂಶವನ್ನು ಪರಿಗಣಿಸಿತು.
ಸಭೆಯ ನಡಾವಳಿಗಳು ಹಾಗೂ ನೀರಿನ ಸಮಸ್ಯೆ ಪರಿಹರಿಸಲು ಕೈಗೊಂಡ ತೀರ್ಮಾನಗಳನ್ನು ಕುರಿತು ವರದಿ ಮಂಡಿಸಬೇಕು ಎಂದು ಸೂಚಿಸಿ ಜೂನ್ 6ಕ್ಕೆ ವಿಚಾರಣೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.