ADVERTISEMENT

ಅರುಂಧತಿ ರಾಯ್‌ ವಿರುದ್ಧ ಯುಎಪಿಎ ಅಡಿ ಕ್ರಮಕ್ಕೆ ಎಲ್‌ಜಿ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 16:11 IST
Last Updated 14 ಜೂನ್ 2024, 16:11 IST
ಅರುಂಧತಿ ರಾಯ್
ಅರುಂಧತಿ ರಾಯ್   

ನವದೆಹಲಿ: ಪ್ರಚೋದನಾಕಾರಿ ಭಾಷಣ (2010) ಪ್ರಕರಣದಲ್ಲಿ ಲೇಖಕಿ ಅರುಂಧತಿ ರಾಯ್ ಮತ್ತು ಕಾಶ್ಮೀರದ ಮಾಜಿ ಪ್ರಾಧ್ಯಾಪಕ ಶೇಖ್‌ ಶೌಕತ್ ಹುಸೇನ್‌ ಅವರು ಭಯೋತ್ಪಾದನೆ ಆರೋಪವನ್ನು ಎದುರಿಸಬೇಕಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ (ಯುಎಪಿಎ) ಕಲಂ 45(1)ರ ಅಡಿಯಲ್ಲಿ ಇವರಿಬ್ಬರ ವಿರುದ್ಧ ವಿರುದ್ಧ ಕ್ರಮ ಜರುಗಿಸಲು ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಅವರು ಹೊಸದಾಗಿ ಅನುಮತಿ ನೀಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸಂಬಂಧ ರಾಯ್‌ ಮತ್ತು ಹುಸೇನ್‌ ಅವರಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. 

ಸಕ್ಸೇನಾ ಅವರು ಎಂಟು ತಿಂಗಳ ಹಿಂದೆಯಷ್ಟೇ ಭಾರತೀಯ ದಂಡ ಸಂಹಿತೆಯ ಕಲಂ 153ಎ, 153ಬಿ ಮತ್ತು 505ರ ಅಡಿಯಲ್ಲಿ ಇವರಿಬ್ಬರ ವಿರುದ್ಧ  ಕ್ರಮ ಜರುಗಿಸಲು ಅನುಮತಿ ನೀಡಿದ್ದರು.

ADVERTISEMENT

‘ಆಜಾದಿ –ಒಂದೇ ಮಾರ್ಗ’ ವೇದಿಕೆಯಡಿ ರಾಜಕೀಯ ಕೈದಿಗಳ ಬಿಡುಗಡೆಗಾಗಿ 2010ರಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಅವರು ದ್ವೇಷ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಕಾಶ್ಮೀರದ ಸಾಮಾಜಿಕ ಕಾರ್ಯಕರ್ತ ಸುಶೀಲ್ ಪಂಡಿತ್ ಅವರು 2010ರ ಅ.28ರಂದು ತಿಲಕ್‌ಮಾರ್ಗ್ ಪೊಲೀಸ್‌ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದ್ದರು. 

2010ರ ಅಕ್ಟೋಬರ್‌ 21ರಂದು ನವದೆಹಲಿ ಎಲ್‌ಟಿಜಿ ಸಭಾಂಗಣದಲ್ಲಿ ನಡೆದ ಸಮ್ಮೇಳನದಲ್ಲಿ, ಭಾರತದಿಂದ ಕಾಶ್ಮೀರವನ್ನು ಪ್ರತ್ಯೇಕಗೊಳಿಸುವ ಉದ್ದೇಶ ಕುರಿತು ಚರ್ಚಿಸಲಾಗಿತ್ತು. ರಾಯ್‌ ಮತ್ತು ಹುಸೇನ್‌ ಅವರು ಅಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಮತ್ತಿಬ್ಬರು ಆರೋಪಿಗಳಾಗಿದ್ದ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ಮತ್ತು ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸೈಯದ್ ಅಬ್ದುಲ್ ರೆಹಮಾನ್‌ ಗಿಲಾನಿ ಅವರು ಪ್ರಕರಣದ ವಿಚಾರಣೆ ಹಂತದಲ್ಲಿರುವಾಗಲೇ ಮೃತಪಟ್ಟಿದ್ದರು. ಇಬ್ಬರನ್ನು ಸಂಸತ್ತಿನ ಮೇಲಿನ ದಾಳಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ಹಿಂದೆ ಖುಲಾಸೆಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.