ADVERTISEMENT

ಸ್ಥಿರಾಸ್ತಿಗಳ ನೆಲಸಮ: ದೇಶಕ್ಕೆಲ್ಲ ಒಂದೇ ಮಾರ್ಗಸೂಚಿ ರೂಪಿಲಾಗುವುದು; ‘ಸುಪ್ರೀಂ’

ಪಿಟಿಐ
Published 1 ಅಕ್ಟೋಬರ್ 2024, 13:25 IST
Last Updated 1 ಅಕ್ಟೋಬರ್ 2024, 13:25 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ‘ಅನಧಿಕೃತವಾಗಿ ಯಾವುದೇ ವ್ಯಕ್ತಿ ನಿರ್ಮಾಣ ಮಾಡಿರುವ ಕಟ್ಟಡವನ್ನು ಆತನ ಧರ್ಮ ಅಥವಾ ನಂಬಿಕೆಗಳನ್ನು ಲೆಕ್ಕಿಸದೇ ನೆಲಸಮ ಮಾಡಬೇಕು. ಈ ಕುರಿತಂತೆ ದೇಶಕ್ಕೆಲ್ಲ ಅನ್ವಯವಾಗುವಂತೆ ಸಮಗ್ರ ಮಾರ್ಗಸೂಚಿಗಳನ್ನು ಜಾರಿಮಾಡಲಾಗುವುದು’ ಎಂದು ನ್ಯಾಯಮೂರ್ತಿಗಳಾದ ಬಿ.ಆರ್‌. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಮಂಗಳವಾರ ಹೇಳಿದೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಸ್ಥಿರಾಸ್ತಿಗಳ ನೆಲಸಮ ಮತ್ತು ರಸ್ತೆಗಳ ನಡುವೆ ಇರುವ ದರ್ಗಾ ಅಥವಾ ದೇವಸ್ಥಾನ ಸೇರಿದಂತೆ ಯಾವುದೇ ಧಾರ್ಮಿಕ ಕಟ್ಟಡವನ್ನು ನೆಲಸಮಗೊಳಿಸುವ ಕುರಿತಂತೆ ಮಾರ್ಗಸೂಚಿ ರಚನೆ ಬಗ್ಗೆ ಸುಪ್ರೀಂ ಕೋರ್ಟ್ ಈ ಸ್ಪಷ್ಟನೆ ನೀಡಿದೆ.

ಯಾವುದೇ ಒಬ್ಬ ಆರೋಪಿ ಅಥವಾ ಪ್ರಕರಣದಲ್ಲಿ ದೋಷಿ ಎಂಬ ಕಾರಣಕ್ಕೆ ಅವರ ಕಟ್ಟಡ ನೆಲಸಮ ಮಾಡುವುದು ಸೂಕ್ತ ಕಾರಣವಲ್ಲ ಎಂದಿರುವ ನ್ಯಾಯಾಲಯವು, ವಿವಿಧ ರಾಜ್ಯಗಳಲ್ಲಿ ಆರೋಪಿಗಳ ಸ್ಥಿರಾಸ್ತಿಗಳನ್ನು ಕೆಡವಲಾಗಿದೆ ಎಂದು ಸಲ್ಲಿಸಲಾಗಿರುವ ಹಲವು ಅರ್ಜಿಗಳ ಕುರಿತಾದ ತೀರ್ಪನ್ನು ಕಾಯ್ದಿರಿಸಿದೆ.

ADVERTISEMENT

ಸುಪ್ರೀಂ ಕೋರ್ಟ್ ಅನುಮತಿ ಇಲ್ಲದೆ ಸ್ಥಿರಾಸ್ತಿ ಸೆನಸಮಕ್ಕೆ ತಡೆ ಮುಂದುವರಿಕೆ

ಅಕ್ಟೋಬರ್ 1ರವರೆಗೆ ತನ್ನ ಅನುಮತಿ ಇಲ್ಲದೆ ಯಾವುದೇ ಕಟ್ಟಡ ನೆಲಸಮ ಮಾಡಬಾರದು ಎಂದು ಸೆಪ್ಟೆಂಬರ್ 17ರಂದು ಆದೇಶಿಸಿದ್ದ ನ್ಯಾಯಪೀಠ, ಪ್ರಕರಣದ ವಿಚಾರಣೆ ಅಂತ್ಯಗೊಳ್ಳುವವರೆಗೂ ಆದೇಶ ಮುಂದುವರಿಯಲಿದೆ ಎಂದು ಹೇಳಿದೆ.

‘ನಮ್ಮದು ಜಾತ್ಯತೀತ ದೇಶ, ದೇಶದ ಎಲ್ಲ ನಾಗರಿಕರು, ಸಂಸ್ಥೆಗಳಿಗೆ ಮಾರ್ಗಸೂಚಿ ರೂಪಿಸುತ್ತಿದ್ದೇವೆಯೇ ಹೊರತು ಯಾವುದೇ ಒಂದು ನಿರ್ದಿಷ್ಟ ಸಮುದಾಯಕಲ್ಲ. ರಸ್ತೆಯ ಮಧ್ಯೆ ಇರುವ ಯಾವುದೇ ದರ್ಗಾ ಅಥವಾ ದೇಗುಲ ಆಗಿದ್ದರೂ ಸರಿ ಅದನ್ನು ನೆಲಸಮ ಮಾಡಬೇಕೆಂದು ವಿಚಾರಣೆಯ ಮೊದಲ ದಿನದಿಂದಲೂ ಹೇಳುತ್ತಿದ್ದೇವೆ. ಸಾರ್ವಜನಿಕರ ಸುರಕ್ಷತೆ ಮತ್ತು ಸಾರ್ವಜನಿಕರ ಹಿತಾಸಕ್ತಿ ಅತ್ಯಂತ ಪ್ರಮುಖ’ಎಂದು ಪೀಠ ಹೇಳಿದೆ.

ಯಾವುದೇ ಒಂದು ನಿರ್ದಿಷ್ಟ ಸಮುದಾಯಕ್ಕೆ ಭಿನ್ನ ಕಾನೂನು ಇರಬಾರದು ಎಂಬುದನ್ನು ನ್ಯಾಯಪೀಠ ಪರಿಗಣಿಸಿದೆ.

‘ಯಾರೋ ಒಬ್ಬ ಆರೋಪಿ ಅಥವಾ ಶಿಕ್ಷೆಗೊಳಗಾಗಿದ್ದಾರೆ ಎಂಬುದು ಅವರ ಕಟ್ಟಡ ನೆಲಸಮಕ್ಕೆ ಸೂಕ್ತ ಕಾರಣವಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸುತ್ತಿದ್ದೇವೆ’ಎಂದಿದೆ.

ಯಾವುದೇ ಒತ್ತುವರಿಯನ್ನು ನ್ಯಾಯಪೀಠ ರಕ್ಷಿಸುವುದಿಲ್ಲ

ರಸ್ತೆ, ಫುಟ್‌ಪಾತ್, ಸರ್ಕಾರಿ ಭೂಮಿ, ಅರಣ್ಯ, ನೀರಿನ ತಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳ ಯಾವುದೇ ಒತ್ತುವರಿಯನ್ನು ನ್ಯಾಯಪೀಠ ರಕ್ಷಿಸುವುದಿಲ್ಲ. ನಾವು ನೀಡುವ ನಿರ್ದೇಶನಗಳು ದೇಶಕ್ಕೆಲ್ಲ ಅನ್ವಯವಾಗಲಿವೆ. ನಮ್ಮ ಆದೇಶಗಳು ಸಾರ್ವಜನಿಕ ಸ್ಥಳಗಳನ್ನು ಒತ್ತುವರಿ ಮಾಡಿಕೊಂಡವರಿಗೆ ಅನುಕೂಲ ಮಾಡಿಕೊಡುವುದಿಲ್ಲ ಎಂಬುದರ ಕುರಿತಂತೆ ಎಚ್ಚರ ವಹಿಸುತ್ತೇವೆ ಎಂದು ಪೀಠ ಹೇಳಿದೆ.

ಒತ್ತುವರಿ ತೆರವು ಕಾರ್ಯಾಚರಣೆಗಾಗಿ ರಿಜಿಸ್ಟ್ರಾರ್ ಪೋಸ್ಟ್ ಮೂಲಕ ನೋಟಿಸ್ ಕಳುಹಿಸಲಾಗಿದೆ. ಅವುಗಳನ್ನು ಆನ್‌ಲೈನ್‌ನಲ್ಲೂ ಪ್ರದರ್ಶಿಸಬೇಕು. ಇದು ಡಿಜಿಟಲ್ ದಾಖಲೆಯಾಗಲಿದೆ ಎಂದು ನ್ಯಾಯಪೀಠ ಹೇಳಿದೆ.

ಅಧಿಕಾರಿಗಳು ಮಾಡುವ ಆದೇಶಗಳನ್ನು ಸರಿಪಡಿಸುವ ದೃಷ್ಟಿಯಿಂದ ನ್ಯಾಯಾಂಗದ ಪರಿಶೀಲನೆ ಅಗತ್ಯವಿದೆ. ನೋಟಿಸ್ ನೀಡಿದ ಸಮಯ ಮತ್ತು ಕಟ್ಟಡ ಉರುಳಿಸುವುದರ ನಡುವೆ 10ರಿಂದ 15 ದನಗಳ ಅಂತರ ಇರಬೇಕು. ಆಗ, ಕಟ್ಟಡದ ಮಾಲೀಕರು ಬದಲಿ ವ್ಯವಸ್ಥೆ ಮಾಡಿಕೊಳ್ಳಲು ಅವಕಾಶವಿರುತ್ತದೆ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.