ADVERTISEMENT

ದೂರವಾಣಿ ಕದ್ದಾಲಿಸಲು ಐಪಿಎಸ್‌ ಅಧಿಕಾರಿ ರಶ್ಮಿ ಸಿಎಂ ಅನುಮತಿ ಪಡೆದಿದ್ದರೇ ?

ಮಹಾರಾಷ್ಟ್ರ ಸಚಿವ ನವಾಬ್‌ ಮಲಿಕ್ ಪ್ರಶ್ನೆ

ಪಿಟಿಐ
Published 29 ಜುಲೈ 2021, 10:17 IST
Last Updated 29 ಜುಲೈ 2021, 10:17 IST
‍ಪ್ರಾತಿನಿಧಿಕ ಚಿತ್ರ
‍ಪ್ರಾತಿನಿಧಿಕ ಚಿತ್ರ   

ಮುಂಬೈ: ‘ದೂರವಾಣಿ ಕರೆಗಳನ್ನು ಕದ್ದಾಲಿಸಲು ಹಿರಿಯ ಐಪಿಎಸ್‌ ಅಧಿಕಾರಿ ರಶ್ಮಿ ಶುಕ್ಲಾ ಅವರು ಮುಖ್ಯಮಂತ್ರಿಗಳ ಒಪ್ಪಿಗೆ ಪಡೆದಿದ್ದರೇ?‘ ಎಂದು ಸಚಿವ ನವಾಬ್‌ ಮಲಿಕ್‌ ಪ್ರಶ್ನಿಸಿದ್ದಾರೆ.

‘ಪೊಲೀಸ್ ವರ್ಗಾವಣೆ ಮತ್ತು ನಿಯೋಜನೆಯ ವಿಚಾರದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ದೂರುಗಳು ಬಂದಿರುವ ಕಾರಣ ಕೆಲವು ದೂರವಾಣಿ ಸಂಖ್ಯೆಗಳ ಮೇಲೆ ನಿಗಾ ವಹಿಸಲು ಮಹಾರಾಷ್ಟ್ರ ಸರ್ಕಾರ ಅನುಮತಿ ನೀಡಿದೆ‘ ಎಂದು ರಶ್ಮಿ ಶುಕ್ಲಾ ಬುಧವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದರು. ಇದಾದ ಬೆನ್ನಲ್ಲೇ, ನವಾಬ್‌ ಮಲಿಕ್ ಈ ಪ್ರಶ್ನೆ ಮಾಡಿದ್ದಾರೆ.

ರಾಜ್ಯ ಗುಪ್ತಚರ ವಿಭಾಗದ ಮುಖ್ಯಸ್ಥರಾಗಿದ್ದ ಶುಕ್ಲಾ ಅವರಿಗೆ, ಕೆಲವು ದೂರವಾಣಿ ಸಂಖ್ಯೆಗಳ ಮೇಲೆ ನಿಗಾ ಇಡಲು ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಸೂಚಿಸಿದ್ದರು. ಅದೇ ವೇಳೆ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೀತಾರಾಮ್ ಕುಂಟೆ ಅವರಿಂದ ಶುಕ್ಲಾ ಭಾರತೀಯ ದೂರಸಂಪರ್ಕ ಕಾಯ್ದೆಯಡಿಯಲ್ಲಿ ಅನುಮತಿ ಪಡೆದಿದ್ದರು. ಜುಲೈ 17, 2020ರಿಂದ ಜುಲೈ 29,2020ರ ನಡುವಿನ ದೂರವಾಣಿ ಕರೆಗಳ ಮೇಲೆ ಕಣ್ಗಾವಲಿಡಲು ಶುಕ್ಲಾ ಅವರಿಗೆ ಅನುಮತಿ ನೀಡಲಾಗಿತ್ತು ಎಂದು ಶುಕ್ಲಾ ಪರ ವಕೀಲ ಮಹೇಶ್ ಜೇಠ್ಮಲಾನಿ ತಿಳಿಸಿದ್ದರು.

ADVERTISEMENT

ನವಾಬ್‌ ಮಲಿಕ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶುಕ್ಲಾ ಪರ ವಕೀಲರು, ‘ಕೆಲವು ದೂರವಾಣಿ ಕರೆಗಳ ಮೇಲೆ ನಿಗಾ ಇಡುವುದಕ್ಕೆ ಸರ್ಕಾರದಿಂದ ಅನುಮತಿ ಪಡೆದಿರುವ ಕುರಿತು ನನ್ನ ಕಕ್ಷಿದಾರರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ‘ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ‘ಆದರೂ, ಶುಕ್ಲಾ ಅವರು ಸರ್ಕಾರದ ಅನುಮತಿ ಪಡೆದು ಕೆಲವು ಅಧಿಕಾರಿಗಳ ದಾರಿ ತಪ್ಪಿಸಿದ್ದಾರೆ‘ ಎಂದು ಎನ್‌ಸಿಪಿ ವಕ್ತಾರರು ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ನವಾಬ್‌ ಮಲಿಕ್‌ ‘ರಶ್ಮಿ ಶುಕ್ಲಾ ಅವರು ದೂರವಾಣಿ ಕರೆಗಳ ಮೇಲೆ ನಿಗಾ ಇಡಲು ಮುಖ್ಯಮಂತ್ರಿಯಿಂದ ಅನುಮತಿ ಪಡೆದಿದ್ದಾರೆಯೇ ಎಂಬುದನ್ನು ಪತ್ತೆ ಮಾಡಬೇಕಿದೆ‘ ಎಂದು ಯಾರ ಹೆಸರನ್ನೂ ಉಲ್ಲೇಖಿಸದೇ ಹೇಳಿದರು.

‘ರಶ್ಮಿ ಅವರು, ದೇಶದ್ರೋಹ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ನೆಪ ಇಟ್ಟುಕೊಂಡು ದೂರವಾಣಿಗಳ ಮೇಲೆ ನಿಗಾ ಇಡಲು ಅನುಮತಿ ಕೋರಿದ್ದಾರೆ. ಆದರೆ ವಾಸ್ತವವಾಗಿ ಅವರು ರಾಜಕೀಯ ವಿರೋಧಿಗಳ ಕರೆಗಳನ್ನು ಕದ್ದಾಲಿಸಿದ್ದಾರೆ‘ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.