ಕೋಲ್ಕತ್ತ: ಬಾಂಗ್ಲಾದೇಶದ ಜೆನೈದಾ-4 ಕ್ಷೇತ್ರದ ಸಂಸದ ಅನ್ವರುಲ್ ಅಜೀಮ್ ಅನಾರ್ ಅವರು ನಾಪತ್ತೆಯಾದ ಎಂಟು ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋಲ್ಕತ್ತದ ನ್ಯೂ ಟೌನ್ನ ಸಂಜೀವ ಗಾರ್ಡನ್ನಲ್ಲಿರುವ ಅಪಾರ್ಟ್ಮೆಂಟ್ವೊಂದರಲ್ಲಿ ಅನಾರ್ ಅವರ ಮೃತದೇಹ ತುಂಡುಗಳಾಗಿ ಕತ್ತರಿಸಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅನ್ವರುಲ್ ಅಜೀಂ ಅನಾರ್ ಕೊಲೆ ಪೂರ್ವಯೋಜಿತ ಎಂದು ಪೊಲೀಸರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಮೃತ ಸಂಸದರ ಆಪ್ತ ಕಾರ್ಯದರ್ಶಿ ಅಬ್ದುರ್ ರೌಫ್ ಮಾತನಾಡಿ, ಅಜೀಮ್ ಅನಾರ್ ಸಾವಿನ ಬಗ್ಗೆ ನಮಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ, ಅನಾರ್ ಕುಟುಂಬಸ್ಥರು ಭಾರತೀಯ ವೀಸಾ ಅನುಮೋದನೆಗಾಗಿ ಢಾಕಾದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಅಜೀಮ್ ಅನಾರ್ ಅವರು ಮೇ 12 ರಂದು ವೈದ್ಯಕೀಯ ಚಿಕಿತ್ಸೆಗಾಗಿ ಕೋಲ್ಕತ್ತಕ್ಕೆ ಆಗಮಿಸಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಅವರು ನಾಪತ್ತೆಯಾಗಿದ್ದಾರೆ ಎಂದು ಕೋಲ್ಕತ್ತದಲ್ಲಿರುವ ಬಾಂಗ್ಲಾದೇಶದ ಉಪ ಹೈಕಮಿಷನ್ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದರು.
ವೈದ್ಯಕೀಯ ಚಿಕಿತ್ಸೆಗಾಗಿ ಮೇ 12ರಂದು ಕೋಲ್ಕತ್ತಗೆ ಬಂದಿದ್ದರು. ಬಳಿಕ ನಗರದ ನಗರದ ಉತ್ತರ ಭಾಗಕ್ಕೆ ಹೊಂದಿಕೊಂಡಿರುವ ಬಾರಾನಗರದಲ್ಲಿರುವ ಅವರ ಸ್ನೇಹಿತನ ಮನೆಯಲ್ಲಿ ತಂಗಿದ್ದರು. ಮೇ 13ರಂದು ಯಾರನ್ನೋ ಭೇಟಿಯಾಗಲು ಹೋದವರು ವಾಪಸ್ಸಾಗಿರಲಿಲ್ಲ. ನಂತರ ಅವರ ಸ್ನೇಹಿತ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಅಧಿಕಾರಿ ಹೇಳಿದ್ದರು.
ಕಳೆದ 8 ದಿನಗಳಿಂದ ಅನಾರ್ ಅವರ ಸುಳಿವಿಲ್ಲ. ಹಾಗಿದ್ದರೂ ದೆಹಲಿಗೆ ತೆರಳಿವುದಾಗಿ ಅವರ ಫೋನ್ನಿಂದ ಕುಟುಂಬ ಸದಸ್ಯರಿಗೆ ಸಂದೇಶ ಕಳುಹಿಸಿರುವುದು ಗಮನಕ್ಕೆ ಬಂದಿದೆ. ನಾವು ಪೊಲೀಸರು ಮತ್ತು ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಅವರು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.