ಚೆನ್ನೈ: ಡಿಎಂಕೆ ಪಕ್ಷವು ಭ್ರಷ್ಟಾಚಾರದ ಹಕ್ಕುಸ್ವಾಮ್ಯ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.
ತಮಿಳುನಾಡಿದ ವೆಲ್ಲೂರಿನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಡಿಎಂಕೆ ಪಕ್ಷವು ತಮಿಳು ವಿರೋಧಿ ಸಂಸ್ಕೃತಿಯನ್ನು ಒತ್ತಾಯ ಪೂರ್ವಕವಾಗಿ ಹೇರುತ್ತಿದೆ ಎಂದು ಆರೋಪಿಸಿದ್ದಾರೆ.
ಡಿಎಂಕೆ ಪಕ್ಷವು ಯುವಜನರ ಅವಕಾಶಗಳನ್ನು ನಿರಾಕರಿಸಿದೆ. ಅವರ ಕುಟುಂಬ ರಾಜಕಾರಣದಿಂದಾಗಿ ಯುವಕರು ಮುಂದುವರಿಯಲು ಅವಕಾಶ ಸಿಗುತ್ತಿಲ್ಲ. ಹಳೆ ಚಿಂತನಾ ಬಲೆ, ಹಳೆಯ ರಾಜಕಾರಣದ ಬಲೆಯಲ್ಲೇ ತಮಿಳುನಾಡು ರಾಜ್ಯವನ್ನು ಸಿಲುಕಿಸಲು ಡಿಎಂಕೆ ಪ್ರಯತ್ನಿಸುತ್ತಿದೆ. ಡಿಎಂಕೆ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಲು ಮೂರು ಮಾನದಂಡಗಳಿವೆ. ಕುಟುಂಬ ರಾಜಕಾರಣ, ಭ್ರಷ್ಟಾಚಾರ ಮತ್ತು ತಮಿಳು ವಿರೋಧಿ ಸಂಸ್ಕೃತಿ ಈ ಮೂರು ಮಾನದಂಡಗಳಾಗಿವೆ ಎಂದು ಮೋದಿ ಟೀಕಿಸಿದ್ದಾರೆ.
ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ಬಿಟ್ಟುಕೊಟ್ಟಿವೆ ಎಂದು ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ ಮೋದಿ, ಮೀನುಗಾರರ ಬಗ್ಗೆ ಡಿಎಂಕೆಯ ಸಹಾನುಭೂತಿ ನಕಲಿ ಎಂದಿದ್ದಾರೆ. ಎನ್ಡಿಎ ಸರ್ಕಾರವು ಮೀನುಗಾರರಿಗೆ ಸಹಾಯಹಸ್ತ ಚಾಚಿದೆ ಎಂದು ಹೇಳಿದ್ದಾರೆ.
ತಮಿಳುನಾಡಿನ ಶಾಲೆಗಳಲ್ಲಿ ಡ್ರಗ್ಸ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆಯೂ ಮೋದಿ, ಡಿಎಂಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎನ್ಸಿಬಿಯಿಂದ ಬಂಧಿತರಾಗಿರುವ ಡ್ರಗ್ಸ್ ಸರಬರಾಜುದಾರರು ಯಾವ ಕುಟುಂಬದೊಂದಿಗೆ ಸಂಬಂಧ ಹೊಂದಿದ್ದರು ಎಂಬುದು ಜನರಿಗೆ ತಿಳಿಯಲಿದೆ ಎಂದಿದ್ದಾರೆ.
ಡಿಎಂಕೆಯ ರಾಜಕೀಯ ಅಜೆಂಡಾ 'divide divide divide" ಎಂದು ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.