ADVERTISEMENT

ದಳಪತಿ ವಿಜಯ್ ನೇತೃತ್ವದ TVK ಪಕ್ಷದ ಸಿದ್ಧಾಂತದ ಬಗ್ಗೆ DMK, AIADMK ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಅಕ್ಟೋಬರ್ 2024, 10:59 IST
Last Updated 28 ಅಕ್ಟೋಬರ್ 2024, 10:59 IST
<div class="paragraphs"><p>ದಳಪತಿ ವಿಜಯ್</p></div>

ದಳಪತಿ ವಿಜಯ್

   

-ಪಿಟಿಐ ಚಿತ್ರ

ಚೆನ್ನೈ: ತಮಿಳುನಾಡಿನ 2026ರ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ನಟ, ರಾಜಕಾರಣಿ ದಳಪತಿ ವಿಜಯ್‌ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷವು ನಮ್ಮ ಸಿದ್ಧಾಂತವನ್ನು ನಕಲು ಮಾಡಿದೆ ಎಂದು ಆಡಳಿತಾರೂಢ ಡಿಎಂಕೆ ಆರೋಪಿಸಿದರೆ, ಪ್ರಮುಖ ಪ್ರತಿಪಕ್ಷವಾದ ಎಐಎಡಿಎಂಕೆ, ‘ಹೊಸ ಬಾಟಲಿಯಲ್ಲಿ ಹಳೆಯ ವೈನ್’ ಎಂದು ಲೇವಡಿ ಮಾಡಿದೆ.

ADVERTISEMENT

ಟಿವಿಕೆ ಪಕ್ಷದ ತತ್ವಗಳು ವಿವಿಧ ಪಕ್ಷಗಳ ಪ್ರಸ್ತುತ ರಾಜಕೀಯ ನಿಲುವುಗಳ ಕಾಕ್‌ಟೈಲ್‌ ಆಗಿದೆ ಎಂದು ಗುಡುಗಿರುವ ಎಐಎಡಿಎಂಕೆ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಟ ಕಮಲ್ ಹಾಸನ್ ಅವರ ಮಕ್ಕಳ್ ನೀದಿ ಮೈಯಮ್ (ಎಂಎನ್ಎಂ) ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಭಾನುವಾರ ನಡೆದ ಪಕ್ಷದ ಮೊದಲ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡಿದ್ದ ವಿಜಯ್ ಅವರು, ‘ವಿಭಜಕ’ ಬಿಜೆಪಿ ಮತ್ತು ‘ಭ್ರಷ್ಟ’ ಡಿಎಂಕೆಯು ಕ್ರಮವಾಗಿ ತಮ್ಮ ‘ಸೈದ್ಧಾಂತಿಕ’ ಹಾಗೂ ‘ರಾಜಕೀಯ’ ವಿರೋಧಿಗಳು ಎಂದು ಘೋಷಿಸಿದ್ದರು.

50 ವರ್ಷದ ವಿಜಯ್ ಅವರು ‘ಜಾತ್ಯತೀತತೆ’ ಮತ್ತು ‘ಸಾಮಾಜಿಕ ನ್ಯಾಯ’ವು ಟಿವಿಕೆಯ ಎರಡು ಸಿದ್ಧಾಂತಗಳು ಎಂದು ಪ್ರಕಟಿಸಿದರಲ್ಲದೆ, ‘ದ್ರಾವಿಡವಾದ‘ ಮತ್ತು ‘ತಮಿಳು ರಾಷ್ಟ್ರೀಯತೆ’ಯನ್ನು ತಮಿಳುನಾಡಿನ ‘ಎರಡು ಕಣ್ಣುಗಳು’ ಎಂದು ಬಣ್ಣಿಸಿದ್ದರು. ‘ಟಿವಿಕೆಯ ಸಿದ್ಧಾಂತ ಮತ್ತು ನನ್ನ ನಾಯಕತ್ವವನ್ನು ಒಪ್ಪಿಕೊಳ್ಳುವ ರಾಜಕೀಯ ಪಕ್ಷಗಳೊಂದಿಗೆ ಅಧಿಕಾರವನ್ನು ಹಂಚಿಕೊಳ್ಳಲು ಸಿದ್ಧನಿದ್ದೇನೆ’ ಎಂದು ಅವರು ಘೋಷಿಸಿದ್ದರು.

ವಿಜಯ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿಎಂಕೆ ನಾಯಕ ಇ.ವಿ.ಕೆ.ಎಸ್‌. ಇಳಂಗೋವನ್‌, 'ನಮ್ಮ ಪಕ್ಷದ ನೀತಿಗಳನ್ನು ವಿಜಯ್ ನಕಲು ಮಾಡಿ, ಹೊಸದಾಗಿ ಘೋಷಿಸಿದ್ದಾರೆ. ಅವರು (ವಿಜಯ್) ಏನು ಹೇಳಿದ್ದಾರೋ ಅದನ್ನು ನಾವು ಈಗಾಗಲೇ ಹೇಳಿದ್ದೇವೆ ಮತ್ತು ನಾವು ಅನುಸರಿಸುತ್ತಿದ್ದೇವೆ’ ಎಂದು ತಿರುಗೇಟು ನೀಡಿದ್ದಾರೆ.

‘ನಮ್ಮ ಪಕ್ಷವು (ಡಿಎಂಕೆ) ಜನರ ಸಮಸ್ಯೆಗಳಿಗಾಗಿ ನಿರಂತರವಾಗಿ ಹೋರಾಟ ನಡೆಸಿದೆ. ಆದರೆ, ವಿಜಯ್ ಅವರ ಪಕ್ಷವು ರಾಜಕೀಯಕ್ಕೆ ಪ್ರವೇಶಿಸಿದ ತಕ್ಷಣವೇ ಅಧಿಕಾರದಲ್ಲಿರಲು ಹಾತೊರೆಯುತ್ತಿದೆ. ಇದಲ್ಲದೆ, ಟಿವಿಕೆ ನಾಯಕರು ಡಿಎಂಕೆ ನಾಯಕರಂತೆ ಜೈಲಿಗೆ ಹೋಗಿ ಜನರಿಗಾಗಿ ಹೋರಾಡುವುದಿಲ್ಲ’ ಎಂದು ಇಳಂಗೋವನ್‌ ತಿಳಿಸಿದ್ದಾರೆ.

‘ಡಿಎಂಕೆ, ಟಿವಿಕೆ ಸೇರಿದಂತೆ ಇತರ ಪಕ್ಷಗಳ ನಡುವಿನ ವ್ಯತ್ಯಾಸವೆಂದರೆ ನಾವು ಅವರಿಗಿಂತ ಹೆಚ್ಚು ಬಲಿಷ್ಠರಾಗಿದ್ದೇವೆ. ಜನರಿಂದ, ಜನರಿಗಾಗಿ, ಜನರಿಗೋಸ್ಕರವೇ ಕೆಲಸ ಮಾಡುತ್ತೇವೆ. ಹೊಸದಾಗಿ ರಾಜಕೀಯಕ್ಕೆ ಬಂದಿರುವ ವಿಜಯ್ ಅವರಗೆ ಅಭಿನಂದನೆಗಳು. ಅವರು ಈ ಕ್ಷೇತ್ರದಲ್ಲಿ ಬಹುದೂರ ಸಾಗಬೇಕಿದೆ’ ಎಂದು ಎಐಎಡಿಎಂಕೆ ವಕ್ತಾರ ಕೋವೈ ಸತ್ಯನ್ ಹೇಳಿದ್ದಾರೆ.

ಟಿವಿಕೆ ಪಕ್ಷದ ಸಿದ್ಧಾಂತವು ಇತರೆ ಪಕ್ಷಗಳ ಸಿದ್ಧಾಂತ ಮತ್ತು ಹೊಸ ಬಾಟಲಿಯಲ್ಲಿ ಹಳೆಯ ವೈನ್ ಮಿಶ್ರಣದಂತಿದೆ. ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳಿಂದ ತೆಗೆದುಕೊಂಡ ಕಾಕ್ಟೈಲ್ ಸಿದ್ಧಾಂತವಾಗಿದೆ. ವಿಜಯ್‌ ಅವರು ಜಾತಿಗಣತಿ ಸೇರಿದಂತೆ ಹಲವು ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಇದನ್ನು ಕಾರ್ಯರೂಪಕ್ಕೆ ತರಲು ನಾವು ಅವರಿಗೆ ಸಮಯ ನೀಡುತ್ತೇವೆ ಎಂದು ಸತ್ಯನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.