ADVERTISEMENT

ಕಾಂಗ್ರೆಸ್‌, ಎಎಪಿ ಮೈತ್ರಿಗೆ ಅವಕಾಶ ಕಾಣುತ್ತಿಲ್ಲ: ಜೈರಾಮ್‌ ರಮೇಶ್

ಪಿಟಿಐ
Published 4 ಜುಲೈ 2024, 14:13 IST
Last Updated 4 ಜುಲೈ 2024, 14:13 IST
ಜೈರಾಮ್ ರಮೇಶ್ 
ಜೈರಾಮ್ ರಮೇಶ್    

ನವದೆಹಲಿ: ಹರಿಯಾಣ ಮತ್ತು ದೆಹಲಿ ವಿಧಾನಸಭೆಗಳಿಗೆ ನಡೆಯಲಿರುವ ಚುನಾವಣೆಗಳಲ್ಲಿ ಕಾಂಗ್ರೆಸ್‌ ಮತ್ತು ಆಮ್‌ ಆದ್ಮಿ ಪಕ್ಷ (ಎಎಪಿ) ನಡುವಿನ ಮೈತ್ರಿಗೆ ಅವಕಾಶವಿರುವಂತೆ ಕಾಣುತ್ತಿಲ್ಲ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್ ಗುರುವಾರ ಹೇಳಿದ್ದಾರೆ.

ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಗಳಲ್ಲಿ ‘ಇಂಡಿಯಾ’ ಒಕ್ಕೂಟ ಒಗ್ಗಟ್ಟಿನ ಹೋರಾಟ ನಡೆಸಲಿದೆ ಎಂದೂ ಅವರು ಹೇಳಿದ್ದಾರೆ.

ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಅವರು, ‘ರಾಜ್ಯಗಳ ವಿಧಾನಸಭೆಗಳಿಗೆ ನಡೆಯುವ ಚುನಾವಣೆಗಳಿಗೆ ಸಂಬಂಧಿಸಿ ‘ಇಂಡಿಯಾ’ ಒಕ್ಕೂಟದಲ್ಲಿ ಏಕರೀತಿಯ ಸೂತ್ರವೆಂಬುದೇನೂ ಇಲ್ಲ. ಕಾಂಗ್ರೆಸ್‌ ಮತ್ತು ಇತರ ಮಿತ್ರ ಪಕ್ಷಗಳ ನಾಯಕರ ನಡುವೆ ಒಮ್ಮತ ಕಂಡುಬರುವ ರಾಜ್ಯಗಳಲ್ಲಿ ಮೈತ್ರಿಕೂಟ ಸ್ಪರ್ಧಿಸಲಿದೆ’ ಎಂದಿದ್ದಾರೆ.

ADVERTISEMENT

‘ಲೋಕಸಭಾ ಚುನಾವಣೆ ವೇಳೆ ಪಂಜಾಬ್‌ನಲ್ಲಿ ‘ಇಂಡಿಯಾ’ ಮೈತ್ರಿಕೂಟದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ. ಹರಿಯಾಣದಲ್ಲಿ ಒಂದು ಸ್ಥಾನವನ್ನು ಎಎಪಿಗೆ ಬಿಟ್ಟುಕೊಟ್ಟಿದ್ದೆವು. ಆದರೆ, ಮುಂಬರುವ ವಿಧಾನಸಭೆ ಚುನಾವಣೆಗಳಲ್ಲಿ ಈ ರಾಜ್ಯಗಳಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳು ಸ್ಪರ್ಧೆ ಮಾಡುವುದಿಲ್ಲ ಎನಿಸುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

‘ಪಶ್ಚಿಮ ಬಂಗಾಳ ವಿಚಾರದಲ್ಲಿಯೂ ನಾನು ಇದೇ ಮಾತು ಹೇಳಿದ್ದೆ. ಲೋಕಸಭಾ ಚುನಾವಣೆಗೆ ಮಾತ್ರ ಮೈತ್ರಿಕೂಟದಿಂದ ಸ್ಪರ್ಧೆ ಇರಲಿದ್ದು, ವಿಧಾನಸಭೆ ಚುನಾವಣೆ ವೇಳೆ ಮಿತ್ರ ಪಕ್ಷಗಳ ನಾಯಕರು ಬಯಸಿದರೆ ಮಾತ್ರ ಮೈತ್ರಿ ಇರಲಿದೆ ಎಂದಿದ್ದೆ’ ಎಂದು ಜೈರಾಮ್‌ ರಮೇಶ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.