ನವದೆಹಲಿ : ಕೆಂಪು ಸಮುದ್ರದಲ್ಲಿ ಕಡಲ ಭದ್ರತೆ ಸವಾಲು ಹಾಗೂ ಹೌತಿ ಗುಂಪುಗಳಿಂದ ವ್ಯಾಪಾರಿ ಹಡಗುಗಳ ಮೇಲಿನ ಇತ್ತೀಚಿನ ದಾಳಿಗಳ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಗುರುವಾರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರೊಂದಿಗೆ ಮಾತನಾಡಿದ್ದಾರೆ.
ತಮ್ಮ ದೂರವಾಣಿ ಸಂಭಾಷಣೆಯಲ್ಲಿ ದಾಳಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಉಭಯ ನಾಯಕರು ಈ ಪ್ರದೇಶದಲ್ಲಿ ಕಡಲ ಭದ್ರತೆಗೆ ತಮ್ಮ ಸಹಕಾರವನ್ನು ಪುನರುಚ್ಚರಿಸಿದ್ದಾರೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿದ್ದಾರೆ.
ಮುಕ್ತ ವಾಣಿಜ್ಯ ಚಟುವಟಿಕೆ, ನೌಕಾಪಡೆಗಳಿಗೆ ಅಪಾಯ ಮತ್ತು ಅಂತರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುವುದನ್ನು ತಡೆಯುವುದು ಸಂಭಾಷಣೆಯ ನಿರ್ಣಾಯಕ ಭಾಗವಾಗಿತ್ತು ಎಂದು ಯುಸ್ ರಾಜ್ಯ ಇಲಾಖೆ ತಿಳಿಸಿದೆ.
ಅಲ್ಲದೇ ಕೆಂಪು ಸಮುದ್ರದಲ್ಲಿ ಅಂತರರಾಷ್ಟ್ರೀಯ ವ್ಯಾಪಾರವನ್ನು ಸುಗಮಗೊಳಿಸುವ ಪ್ರಮುಖ ವಾಣಿಜ್ಯ ಕಾರಿಡಾರ್ ಬಗ್ಗೆ ಬ್ಲಿಂಕೆನ್ ಎಂದು ಒತ್ತಿ ಹೇಳಿದರು. ಈ ಪ್ರದೇಶದಲ್ಲಿ ನೌಕಾಯಾನ ಸ್ವಾತಂತ್ರ್ಯವನ್ನು ರಕ್ಷಿಸುವಲ್ಲಿ ಭಾರತದೊಂದಿಗೆ ಹೆಚ್ಚಿದ ಸಹಕಾರವನ್ನು ಅವರು ಸ್ವಾಗತಿಸಿದರು ಎಂದು ಮ್ಯಾಥ್ಯೂ ಮಿಲ್ಲರ್ ಹೇಳಿಕೆಯೊಂದರಲ್ಲಿ ತಿಳಿಸಿದರು.
ಉಭಯ ನಾಯಕರು ಇಸ್ರೇಲ್-ಹಮಾಸ್ ಸಂಘರ್ಷ ಉಲ್ಬಣಗೊಳ್ಳುವುದನ್ನು ತಡೆಯುವ ಪ್ರಯತ್ನ ಮತ್ತು ಗಾಜಾದಲ್ಲಿ ನಾಗರಿಕರಿಗೆ ಮಾನವೀಯ ನೆರವು ಹೆಚ್ಚಿಸುವ ಬಗ್ಗೆಯೂ ಚರ್ಚಿಸಿದರು. ಜತೆಗೆ ಉಕ್ರೇನ್ ವಿರುದ್ಧ ರಷ್ಯಾದ ಅಕ್ರಮಣಕಾರಿ ನಿಲುವಿನ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ, ಜೈಶಂಕರ್, ‘ನನ್ನ ಸ್ನೇಹಿತ ಬ್ಲಿಂಕೆನ್ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ನಮ್ಮ ಸಂಭಾಷಣೆಯು ಕಡಲ ಭದ್ರತಾ ಸವಾಲುಗಳ ಮೇಲೆ ಕೇಂದ್ರೀಕರಿಸಿದೆ. ವಿಶೇಷವಾಗಿ ಕೆಂಪು ಸಮುದ್ರ ಪ್ರದೇಶ, ಗಾಜಾ, ಉಕ್ರೇನ್ ಸಂಘರ್ಷ ಸೇರಿದಂತೆ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಪರಿಸ್ಥಿತಿಯ ಕುರಿತಾಗಿದೆ' ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.