ನವದೆಹಲಿ: ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವು (ಎನ್ಸಿಪಿ) ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲು ಚುನಾವಣಾ ಆಯೋಗವು ಸೋಮವಾರ ಅನುಮತಿ ನೀಡಿದೆ.
ಪಕ್ಷದ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ನೇತೃತ್ವದ ಎಂಟು ಮಂದಿ ಸದಸ್ಯರನ್ನೊಳಗೊಂಡ ನಿಯೋಗವು, ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಿತ್ತು. ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಆಯೋಗ ಈ ನಿರ್ಧಾರ ಕೈಗೊಂಡಿದೆ.
ಜನಪ್ರತಿನಿಧಿಗಳ ಕಾಯ್ದೆ–1952ರ ಪ್ರಕಾರ, ಇತರೆ ರಾಜಕೀಯ ಪಕ್ಷಗಳ ರೀತಿ ಎನ್ಸಿಪಿಯ ಶರದ್ ಪವಾರ್ ಬಣವು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಹೊರತುಪಡಿಸಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ಸ್ವಯಂಪ್ರೇರಿತವಾಗಿ ನೀಡುವ ಎಷ್ಟೇ ಪ್ರಮಾಣದ ದೇಣಿಗೆಯನ್ನು ಪಡೆಯಲು ಅವಕಾಶವಿದೆ ಎಂದು ಆಯೋಗ ತಿಳಿಸಿದೆ.
ಕಳೆದ ವರ್ಷದ ಜುಲೈನಲ್ಲಿ ಶರದ್ ಪವಾರ್ ವಿರುದ್ಧ ಬಂಡಾಯ ಸಾರಿದ್ದ ಅಜಿತ್ ಪವಾರ್, ಮಹಾರಾಷ್ಟ್ರ ವಿಧಾನಸಭೆಯಲ್ಲಿ ಎನ್ಸಿಪಿಯ ಮೂರನೇ ಎರಡರಷ್ಟು ಶಾಸಕರ ಬೆಂಬಲ ತಮಗಿದೆ. ಹೀಗಾಗಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಹೆಸರು ಮತ್ತು ಅದರ ಚಿಹ್ನೆಯು ತಮಗೇ ಸೇರಬೇಕು ಎಂದು ಪ್ರತಿಪಾದಿಸಿದ್ದರು.
ಅಜಿತ್ ಪವಾರ್ ಅವರ ಈ ಪ್ರತಿಪಾದನೆಯನ್ನು ಆಯೋಗವು ಎತ್ತಿಹಿಡಿದಿತ್ತು. ಅಲ್ಲದೆ, 2024ರ ಲೋಕಸಭಾ ಚುನಾವಣೆಯ ಭಾಗವಾಗಿ ಹೊಸ ಹೆಸರು ಆಯ್ಕೆ ಮಾಡಿಕೊಳ್ಳುವಂತೆ ಶರದ್ ಪವಾರ್ ಬಣಕ್ಕೆ ಆಯೋಗ ಸೂಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.