ನವದೆಹಲಿ: ಎನ್ಪಿಪಿ ನಾಯಕ ಹರ್ಷ್ ದೇವ್ ಸಿಂಗ್ ಅವರ ಬಂಧನದ ವಿಷಯದಲ್ಲಿ ಚುನಾವಣಾ ಆಯೋಗದ ನಡೆ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್, 2014ರ ಬಳಿಕ ಚುನಾವಣಾ ಆಯೋಗದ ಸ್ವಾತಂತ್ರ್ಯವನ್ನು ತೀವ್ರವಾಗಿ ನಾಶಪಡಿಸಲಾಗಿದೆ ಎಂದು ಟೀಕಿಸಿದೆ.
ಜಮ್ಮು–ಕಾಶ್ಮೀರದಲ್ಲಿ ಮುಂಬರುವ ಲೋಕಸಭೆ ಚುನಾವಣೆಗೆ ಸಿದ್ಧತೆಗಳನ್ನು ಪರಿಶೀಲಿಸಲು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇತೃತ್ವದ ಚುನಾವಣಾ ಆಯೋಗದ ಅಧಿಕಾರಿಗಳ ತಂಡ ಬುಧವಾರ ಜಮ್ಮು ತಲುಪಿದೆ.
ಈ ಕುರಿತು ಎಕ್ಸ್ನಲ್ಲಿ ಅಸಮಾಧಾನ ಹೊರಹಾಕಿರುವ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್, ‘ಇಂದು ಚುನಾವಣಾ ಆಯೋಗ ಜಮ್ಮುವಿನಲ್ಲಿದೆ. ಆದರೆ ಜಮ್ಮು–ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಸುವಂತೆ ಪ್ರತಿಭಟಿಸಿದ ನ್ಯಾಶನಲ್ ಪ್ಯಾಂಥರ್ಸ್ ಪಾರ್ಟಿ (ಎನ್ಪಿಪಿ) ಅಧ್ಯಕ್ಷ ಮತ್ತು ಮಾಜಿ ಸಚಿವ ನಾಯಕ ಹರ್ಷ್ ದೇವ್ ಸಿಂಗ್ ಅವರನ್ನು ಬಂಧಿಸಲಾಗಿದೆ. ಈ ವಿಷಯದಲ್ಲಿ ಚುನಾವಣಾ ಆಯೋಗದ ನಡೆ ಆಘಾತಕಾರಿಯಾಗಿದೆ’ ಎಂದರು.
‘ಶೇ.100ರಷ್ಟು ವಿವಿಪ್ಯಾಟ್ ಚೀಟಿಗಳ ಬಳಕೆ ಕುರಿತು ಇಂಡಿಯಾ ಮೈತ್ರಿಕೂಟದ ಪಕ್ಷಗಳನ್ನು ಭೇಟಿ ಮಾಡಲು ಚುನಾವಣಾ ಆಯೋಗ ನಿರಾಕರಿಸಿದೆ. ಇದು ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು, 2014ರ ಬಳಿಕ ಆಯೋಗದ ಸ್ವಾತಂತ್ರ್ಯವನ್ನು ತೀವ್ರವಾಗಿ ನಾಶಪಡಿಸಲಾಗಿದೆ’ ಎಂದರು.
‘ಇವಿಎಂ ಫಲಿತಾಂಶದ ಜೊತೆಗೆ ವಿವಿಪ್ಯಾಟ್ ಚೀಟಿಗಳನ್ನು ಗಣನೆಗೆ ತೆಗೆದುಕೊಳ್ಳುವ ಕುರಿತು ಸಲಹೆಗಳನ್ನು ಸಲ್ಲಿಸಲು ಇಂಡಿಯಾ ಮೈತ್ರಿಕೂಟ ಅಪಾಯಿಂಟ್ಮೆಂಟ್ ಪಡೆಯುವುದು ಹೇಗೆ? ಹತ್ತು ತಿಂಗಳಿಂದ ಅವಕಾಶ ಇಲ್ಲ.. ನೋ ಅಪಾಯಿಟ್ಮೆಂಟ್, ಓನ್ಲಿ ಡಿಸ್ಅಪಾಯಿಟ್ಮೆಂಟ್ ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.