ADVERTISEMENT

ಪಶ್ಚಿಮ ಬಂಗಾಳದಲ್ಲಿ ED ಅಧಿಕಾರಿಗಳಿಗೆ ಥಳಿತ: ತನಿಖೆ ನಡೆಸಲು ರಾಜ್ಯಪಾಲರ ಸೂಚನೆ

ಆರೋಪಿ ಶಹಜಹಾನ್‌ಗೆ ಉಗ್ರರ ಸಂಪರ್ಕ ಕುರಿತು ದೂರು

ಪಿಟಿಐ
Published 7 ಜನವರಿ 2024, 13:44 IST
Last Updated 7 ಜನವರಿ 2024, 13:44 IST
ಸಿ.ವಿ. ಆನಂದ್‌ ಬೋಸ್‌
ಸಿ.ವಿ. ಆನಂದ್‌ ಬೋಸ್‌   

ಕೋಲ್ಕತ್ತ: ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ಮೇಲೆ ಪಶ್ಚಿಮ ಬಂಗಾಳದಲ್ಲಿ ನಡೆದ ದಾಳಿ ಪ್ರಕರಣದ ಪ್ರಮುಖ ಆರೋಪಿ, ಟಿಎಂಸಿ ನಾಯಕ ಶಹಜಹಾನ್‌ ಶೇಖ್‌ ಅವರನ್ನು ಕೂಡಲೇ ಬಂಧಿಸುವಂತೆ ರಾಜ್ಯದ ರಾಜ್ಯಪಾಲ ಸಿ.ವಿ. ಆನಂದ್‌ ಬೋಸ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

‘ಶಹಜಹಾನ್‌ ಅವರು ರಾಜ್ಯದ ಗಡಿ ದಾಟಿ ಬೇರೆಡೆ ತೆರಳಿರಬಹುದು, ಅವರಿಗೆ ಉಗ್ರರ ಜೊತೆ ಸಂಪರ್ಕವಿರಬಹುದು. ಈ ಕುರಿತು ಕೂಡಲೇ ತನಿಖೆ ನಡೆಸಬೇಕು’ ಎಂದು ರಾಜ್ಯಪಾಲರು ಹೇಳಿದ್ದಾರೆ ಎಂದು ರಾಜಭವನ ಹೊರಡಿಸಿರುವ ಪ್ರಕಟಣೆಯಲ್ಲಿ ಹೇಳಲಾಗಿದೆ.

ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿ ದಾಳಿ ನಡೆಸಲು ಇ.ಡಿ ಅಧಿಕಾರಿಗಳು ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿಗೆ  ಶುಕ್ರವಾರ ಬಂದಿದ್ದರು. ಅವರ ಮೇಲೆ ಗುಂಪೊಂದು ದಾಳಿ ನಡೆಸಿತ್ತು. ಘಟನೆಯಲ್ಲಿ ಮೂವರು ಅಧಿಕಾರಿಗಳು ಗಾಯಗೊಂಡಿದ್ದರು.

ADVERTISEMENT

ಈ ಘಟನೆ ಕುರಿತು ರಾಜಭವನದ ‘ಶಾಂತಿ ಕಕ್ಷಾ’ದಲ್ಲಿ ದೂರು ದಾಖಲಾಗಿದೆ. ಶಹಜಹಾನ್‌ ಶೇಖ್‌ಗೆ ಕೆಲವು ರಾಜಕೀಯ ನಾಯಕರ ಬೆಂಬಲ ಇದೆ. ಕೆಲವು ಪೊಲೀಸ್‌ ಅಧಿಕಾರಿಗಳೂ ಅವರ ಹಿಂದಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ದೂರಿನ ಹಿನ್ನೆಲೆಯಲ್ಲಿ ರಾಜ್ಯಪಾಲರು, ‘ಶಹಜಹಾನ್‌ ಅವರನ್ನು ಕೂಡಲೇ ಬಂಧಿಸಿ. ಅವರು ತಂಗಿರುವ ಸ್ಥಳದ ಕುರಿತು ಮಾಹಿತಿ ಕಲೆಹಾಕಿ. ಆದೇಶ ಪಾಲನೆ ಕುರಿತು ವರದಿ ನೀಡಿ’ ಎಂದು ರಾಜ್ಯ ಪೊಲೀಸ್‌ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಟಿಎಂಸಿ ತಿರುಗೇಟು: ರಾಜ್ಯಪಾಲರ ಹೇಳಿಕೆಯನ್ನು ಟಿಎಂಸಿ ತೀವ್ರವಾಗಿ ವಿರೋಧಿಸಿದೆ. ‘ಯಾವ ಆಧಾರದಲ್ಲಿ ರಾಜ್ಯಪಾಲರು ಇಂಥ ಹೇಳಿಕೆ ನೀಡಿದ್ದಾರೆ ಎಂದು ನಮಗೆ ತಿಳಿದಿಲ್ಲ. ಸಂವಿಧಾನದ ಪ್ರಕಾರ ರಾಜ್ಯಪಾಲರು ರಾಜ್ಯ ಸರ್ಕಾರದ ಜೊತೆಗೂಡಿ ಕೆಲಸ ಮಾಡಬೇಕು. ಯಾವುದೇ ಬಲವಾದ ಸಾಕ್ಷ್ಯ ಅಥವಾ ವರದಿಯಿಲ್ಲದೇ ಈ ರೀತಿ ಹೇಳಿಕೆ ನೀಡಲು ಹೇಗೆ ಸಾಧ್ಯ. ಅವರು ಇಲ್ಲಿ ಇರುವುದು ಸಮಾನಾಂತರ ಸರ್ಕಾರ ನಡೆಸಲು ಅಲ್ಲ’ ಎಂದು ಟಿಎಂಸಿ ವಕ್ತಾರ ಕುನಾಲ್‌ ಘೋಷ್‌ ಅವರು ಹೇಳಿದ್ದಾರೆ. 

ಬಿಜೆಪಿ ಆರೋಪ: ಇದೇವೇಳೆ, ಇ.ಡಿ ಅಧಿಕಾರಿಗಳ ಮೇಲಿನ ದಾಳಿ ಪ್ರಕರಣದಲ್ಲಿ ಗಡಿಯಾಚೆಗಿನ ಉಗ್ರರು ಮತ್ತು ರೊಹಿಂಗ್ಯಾ ಸಮುದಾಯದ ಕೈವಾಡವಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಆರೋಪಿಸಿದೆ.

ಪರಸ್ಪರ ದೂರು: ದಾಳಿ ಪ್ರಕರಣದ ಕುರಿತು ರಾಜಕೀಯ ಕೆಸರೆರಚಾಟ ನಡೆಯುತ್ತಿರುವ ಬೆನ್ನಲ್ಲೇ, ಶಹಜಾನ್‌ ಅವರ ಕುಟುಂಬ ಮತ್ತು ಇ.ಡಿ ಪರಸ್ಪರರ ವಿರುದ್ಧ ಶನಿವಾರ ದೂರು ದಾಖಲಿಸಿವೆ. ಶಹಜಹಾನ್‌ ದೇಶದಿಂದ ಪರಾರಿಯಾಗುವ ಸಾಧ್ಯತೆ ಇರುವ ಕಾರಣ ಅವರಿಗೆ ಇ.ಡಿ ಲುಕ್‌ಔಟ್‌ ನೋಟಿಸ್‌ ನೀಡಿದೆ.

ಪೊಲೀಸರು ಕೂಡಾ ಸ್ವಯಂ ಪ್ರೇರಿತವಾಗಿ ಇ.ಡಿ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಅವರ ವಿರುದ್ಧ ಕಿರುಕುಳ, ಒತ್ತಾಯದ ಪ್ರವೇಶ ಮತ್ತು ಕಳವು ಆರೋಪ ಹೊರಿಸಿದ್ದಾರೆ.

ರಾಜ್ಯಪಾಲರ ಹೇಳಿಕೆಯನ್ನು ನಾವು ಬೆಂಬಲಿಸುತ್ತೇವೆ. ಶಹಜಹಾನ್‌ ಅವರನ್ನು ಬಂಧಿಸಿದರೆ ಭ್ರಷ್ಟಾಚಾರ ಉಗ್ರವಾದದಲ್ಲಿ ಭಾಗಿ ಆಗಿರುವವರ ಬೃಹತ್‌ ಜಾಲ ಬಯಲಿಗೆ ಬರುತ್ತದೆ
–ಸುಕಾಂತ ಮಜುಂದಾರ್‌ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.