ADVERTISEMENT

ಅಬಕಾರಿ ನೀತಿ ಹಗರಣ: 9ನೇ ಚಾರ್ಜ್‌ಶೀಟ್ ಸಲ್ಲಿಕೆ

ಪಿಟಿಐ
Published 28 ಜೂನ್ 2024, 15:25 IST
Last Updated 28 ಜೂನ್ 2024, 15:25 IST
ಜಾರಿ ನಿರ್ದೇಶನಾಲಯ 
ಜಾರಿ ನಿರ್ದೇಶನಾಲಯ    

ನವದೆಹಲಿ: ದೆಹಲಿ ಅಬಕಾರಿ ನೀತಿಯ ಹಣ ಅಕ್ರಮ ವರ್ಗಾವಣೆ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಶುಕ್ರವಾರ 9ನೇ ಚಾರ್ಜ್‌ಶೀಟ್ ಸಲ್ಲಿಸಿದ್ದು, ವಿನೋದ್ ಚೌಹಾನ್ ಎನ್ನುವ ವ್ಯಕ್ತಿಯನ್ನು ಆರೋಪಿ ಎಂದು ಹೆಸರಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪ್ರಕರಣದ ತನಿಖೆಯ ಭಾಗವಾಗಿ ಚೌಹಾನ್ ಅವರನ್ನು ಮೇ ತಿಂಗಳಲ್ಲಿ ಬಂಧಿಸಲಾಗಿತ್ತು. 

ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ದೆಹಲಿ ಮುಖ್ಯಮಂತ್ರಿ ಹಾಗೂ ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಸಂಸದ ಸಂಜಯ್ ಸಿಂಗ್, ಬಿಆರ್‌ಎಸ್ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್ ಅವರ ಪುತ್ರಿ ಕೆ.ಕವಿತಾ, ಉದ್ಯಮಿಗಳು ಸೇರಿದಂತೆ ಹಲವರನ್ನು ಬಂಧಿಸಿದ್ದು, ಚೌಹಾನ್ ಈ ಸಂಬಂಧ ಬಂಧನಕ್ಕೊಳಗಾದ 18ನೇ ಆರೋಪಿಯಾಗಿದ್ದಾರೆ.

ADVERTISEMENT

ಕವಿತಾ ಅವರ ಬಂಧನಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಯಲ್ಲಿ ಜಾರಿ ನಿರ್ದೇಶನಾಲಯವು ಹಗರಣದಲ್ಲಿ ಚೌಹಾನ್ ಅವರ ಪಾತ್ರವನ್ನು ವಿವರಿಸಿದೆ. 

ಅಭಿಷೇಕ್ ಬೋಯಿನಪಲ್ಲಿ ಅವರ ನಿರ್ದೇಶನದಂತೆ, ಹಣ ತುಂಬಿದ ಎರಡು ದೊಡ್ಡ ಬ್ಯಾಗ್‌ಗಳನ್ನು ದಿನೇಶ್ ಅರೋರಾ ಅವರ ಕಚೇರಿಯಿಂದ ಸಂಗ್ರಹಿಸಿ ಅವನ್ನು ವಿನೋದ್ ಚೌಹಾನ್ ಅವರಿಗೆ ನೀಡಿದ್ದಾಗಿ ಕೆ.ಕವಿತಾ ಅವರ ಸಿಬ್ಬಂದಿಯ ಪೈಕಿ ಒಬ್ಬರು ಹೇಳಿಕೆ ನೀಡಿದ್ದರು. 

ಮತ್ತೊಂದು ಸಂದರ್ಭದಲ್ಲಿ, ನವದೆಹಲಿಯ ತೋಡಾಪುರದ ಬಳಿಯ ವಿಳಾಸವೊಂದರಿಂದ ಹಣದ ಎರಡು ಬ್ಯಾಗ್‌ಗಳನ್ನು ಸಂಗ್ರಹಿಸಿ, ಮತ್ತೆ ಅವನ್ನು ವಿನೋದ್ ಚೌಹಾನ್ ಅವರಿಗೆ ನೀಡಿದ್ದಾರೆ. ಅವರು ಅದನ್ನು ಹವಾಲಾ ಮಾರ್ಗದ ಮೂಲಕ ಗೋವಾದಲ್ಲಿ ಎಎಪಿಯ ಚುನಾವಣಾ ಪ್ರಚಾರಕ್ಕಾಗಿ ಬಳಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.