ADVERTISEMENT

ತುರ್ತು ಪರಿಸ್ಥಿತಿ | ಸಂವಿಧಾನದ ಮೇಲಿನ ದಾಳಿಯ ಅತಿ ದೊಡ್ಡ ಕರಾಳ ಅಧ್ಯಾಯ: ಮುರ್ಮು

ಪಿಟಿಐ
Published 27 ಜೂನ್ 2024, 10:43 IST
Last Updated 27 ಜೂನ್ 2024, 10:43 IST
ದ್ರೌಪದಿ ಮುರ್ಮು
ದ್ರೌಪದಿ ಮುರ್ಮು   

ನವದೆಹಲಿ: 1975ರಲ್ಲಿ ದೇಶದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯು ಸಂವಿಧಾನದ ಮೇಲಿನ ನೇರ ದಾಳಿಯ ಅತಿ ದೊಡ್ಡ ಕರಾಳ ಅಧ್ಯಾಯವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.

ಲೋಕಸಭೆ ಹಾಗೂ ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸಂವಿಧಾನ ರಚನೆಯ ಸಂದರ್ಭದಲ್ಲಿ, ಭಾರತವು ವಿಫಲವಾಗಬೇಕೆಂದು ಜಗತ್ತಿನ ಹಲವು ಶಕ್ತಿಗಳು ಬಯಸಿದ್ದವು. ಸಂವಿಧಾನ ಜಾರಿಗೆ ಬಂದ ನಂತರವೂ ಸಂವಿಧಾನದ ಮೇಲೆ ಹಲವಾರು ದಾಳಿಗಳು ನಡೆದಿವೆ’ ಎಂದು ತಿಳಿಸಿದರು.

1975ರ ಜೂನ್‌ 25ರಂದು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿಕೆಯು ಸಂವಿಧಾನದ ಮೇಲಿನ ನೇರ ದಾಳಿಯ ಅತಿದೊಡ್ಡ ಕರಾಳ ಅಧ್ಯಾಯವಾಗಿದೆ. ಇದರ ವಿರುದ್ಧ ಇಡೀ ದೇಶವೇ ಆಕ್ರೋಶಗೊಂಡಿತ್ತು. ಅಂತಹ ಅಸಂವಿಧಾನಿಕ ಶಕ್ತಿಗಳ ವಿರುದ್ಧ ದೇಶವು ಜಯಶಾಲಿಯಾಯಿತು. ಗಣರಾಜ್ಯ ಮತ್ತಷ್ಟು ಬಲಿಷ್ಠಗೊಂಡಿತು ಎಂದು ಅವರು ಹೇಳಿದರು.

ADVERTISEMENT

ಸಂವಿಧಾನವನ್ನು ಕೇವಲ ಆಡಳಿತದ ಮಾಧ್ಯಮವೆಂದು ನಮ್ಮ ಸರ್ಕಾರ ಪರಿಗಣಿಸುವುದಿಲ್ಲ. ಬದಲಿಗೆ ಸಂವಿಧಾನವು ಸಾರ್ವಜನಿಕ ಪ್ರಜ್ಞೆಯ ಭಾಗವಾಗುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಿದೆ. ಈ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಸರ್ಕಾರವು ನವೆಂಬರ್‌ 26 ಅನ್ನು ಸಂವಿಧಾನ ದಿನವಾಗಿ ಆಚರಿಸಲು ಪ್ರಾರಂಭಿಸಿದೆ ಎಂದು ಮುರ್ಮು ಹೇಳಿದರು.

ಉಪರಾಷ್ಟ್ರಪತಿ ಜಗದೀಪ್‌ ಧನಕರ್‌, ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಸೇರಿದಂತೆ ಹಲವರು 1975ರಲ್ಲಿ ಹೇರಲಾದ ತುರ್ತು ಪರಿಸ್ಥಿತಿಯನ್ನು ಟೀಕಿಸಿದ್ದಾರೆ.

1975ರ ಜೂನ್‌ 25ರಂದು ಮಧ್ಯರಾತ್ರಿ, ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ಸಲಹೆಯಂತೆ ಅಂದಿನ ರಾಷ್ಟ್ರಪತಿಯಾಗಿದ್ದ ಫಕ್ರುದ್ದೀನ್‌ ಅಲಿ ಅಹಮದ್‌ ಅವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.