ADVERTISEMENT

ಕೇಜ್ರಿವಾಲ್ ಬಂಧನದ ಹಿಂದಿನ ಪಿತೂರಿಯನ್ನು ಅಮಿತ್ ಶಾ ಒಪ್ಪಿಕೊಂಡಿದ್ದಾರೆ: ಆತಿಶಿ

ಪಿಟಿಐ
Published 3 ಮೇ 2024, 10:23 IST
Last Updated 3 ಮೇ 2024, 10:23 IST
<div class="paragraphs"><p>ಆತಿಶಿ ಹಾಗೂ ಅಮಿತ್‌ ಶಾ </p></div>

ಆತಿಶಿ ಹಾಗೂ ಅಮಿತ್‌ ಶಾ

   

ಪಿಟಿಐ ಚಿತ್ರಗಳು

ನವದೆಹಲಿ: ಜಾರಿ ನಿರ್ದೇಶನಾಲಯವು (ಇ.ಡಿ) ಪಿತೂರಿ ನಡೆಸಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಬಂಧಿಸಿದೆ ಎಂಬುದನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಒಪ್ಪಿಕೊಂಡಿದ್ದಾರೆ ಎಂದು ದೆಹಲಿ ಸಚಿವೆ ಆತಿಶಿ ಹೇಳಿದ್ದಾರೆ.

ADVERTISEMENT

ಮಾಧ್ಯಮದವರೊಂದಿಗೆ ಮಾತನಾಡಿರುವ ಆತಿಶಿ, 'ಕೇಜ್ರಿವಾಲ್‌ ಅವರಿಗೆ ಮೊದಲ ಸಲ ಸಮನ್ಸ್‌ ನೀಡಿದಾಗಲೇ, ಅವರನ್ನು ಬಂಧಿಸುವ ಉದ್ದೇಶವನ್ನು ಇ.ಡಿ ಹೊಂದಿತ್ತು ಎಂದು ಅಮಿತ್‌ ಶಾ ಅವರು ಇತ್ತೀಚೆಗೆ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ' ಎಂದಿದ್ದಾರೆ.

ಆಮ್‌ ಆದ್ಮಿ ಪಕ್ಷದ (ಎಎಪಿ) ನಾಯಕಿಯೂ ಆಗಿರುವ ಆತಿಶಿ, 'ಇ.ಡಿ ಅಧಿಕಾರಿಗಳು ಕೇಜ್ರಿವಾಲ್‌ ಅವರಿಗೆ ಸಮನ್ಸ್‌ ನೀಡಲು ಆರಂಭಿಸಿದ ದಿನದಿಂದಲೂ, ಇದೊಂದು ಪಿತೂರಿ ಎಂದು ಎಎಪಿಯು ಬಹಿರಂಗವಾಗಿಯೇ ಹೇಳುತ್ತಿದೆ. ಸಮನ್ಸ್‌ಗಳು ಇ.ಡಿ.ಯಿಂದ ಬಂದಿದ್ದಲ್ಲ, ಬದಲಾಗಿ ಬಿಜೆಪಿಯಿಂದ ಬಂದವುಗಳಾಗಿವೆ' ಎಂದು ದೂರಿದ್ದಾರೆ.

'ಇ.ಡಿ ಸ್ವತಂತ್ರ ತನಿಖಾ ಸಂಸ್ಥೆಯಾಗಿದೆ. ಅದು ನೀಡಿದ ಸಮನ್ಸ್‌ಗಳಿಗೂ ತನಗೂ ಸಂಬಂಧವಿಲ್ಲ ಎಂದು ಬಿಜೆಪಿ ವಕ್ತಾರರು ಹೇಳುತ್ತಾರಾದರೂ, ಕೇಂದ್ರ ಸರ್ಕಾರದ 10 ವರ್ಷಗಳ ದುರಾಡಳಿತವನ್ನು ಕೇಜ್ರಿವಾಲ್‌ ಬಯಲು ಮಾಡುತ್ತಾರೆ ಎಂಬ ಭಯ ಬಿಜೆಪಿಗೆ ಇದೆ' ಎಂದು ಕುಟುಕಿದ್ದಾರೆ.

'ಕೇಜ್ರಿವಾಲ್‌ ಅವರನ್ನು ಬಂಧಿಸಿ, ಜೈಲಿನಲ್ಲಿಡಬೇಕು ಎಂಬುದು ಕೇಂದ್ರ ಸರ್ಕಾರ ಹಾಗೂ ಅದರ ಇ.ಡಿ ಸಂಸ್ಥೆಯ ಉದ್ದೇಶವಾಗಿತ್ತು ಎಂದು ಅಮಿತ್‌ ಶಾ ಅವರೇ ಸ್ಪಷ್ಟಪಡಿಸಿದ್ದಾರೆ' ಎಂದಿರುವ ಆತಿಶಿ, 'ಸಮನ್ಸ್‌ಗಳು ಕೇಜ್ರಿವಾಲ್‌ ಅವರನ್ನು ಬಂಧಿಸುವುದಕ್ಕೆ ಕೇವಲ ನೆಪವಷ್ಟೇ' ಎಂದು ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.