ಮುಂಬೈ: ಕಾರ್ಗಿಲ್ ವಿಜಯ್ ದಿನದ 25 ನೇ ವಾರ್ಷಿಕೋತ್ಸವದ ಅಂಗವಾಗಿ ನಿವೃತ್ತ ಮಹಿಳಾ ಸೇನಾಧಿಕಾರಿಯೊಬ್ಬರು ಶ್ರೀನಗರದಿಂದ ದ್ರಾಸ್ಗೆ 160 ಕಿ.ಮೀ. ಓಟವನ್ನು ಪೂರ್ಣಗೊಳಿಸಿದ್ದಾರೆ.
ಲೆಫ್ಟಿನೆಂಟ್ ಕರ್ನಲ್ ಬರ್ಶಾ ರೈ (ನಿವೃತ್ತ) ಅವರು ದಿನಕ್ಕೆ ಸರಾಸರಿ 40 ಕಿ.ಮೀ. ಓಡುವ ಮೂಲಕ ನಾಲ್ಕು ದಿನದಲ್ಲಿ ಈ ಓಟವನ್ನು ಪೂರ್ಣಗೊಳಿಸಿದ್ದು, ‘ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ನಮ್ಮ ವೀರ ಹೃದಯಗಳನ್ನು ಗೌರವಿಸಲು ಈ ಓಟವನ್ನು ಮಾಡಿದ್ದೇನೆ’ ಎಂದು ಪಿಟಿಐಗೆ ತಿಳಿಸಿದ್ದಾರೆ. ಬರ್ಶಾ ಅವರ ಪತಿ ಸಹ ಕಾಶ್ಮೀರದಲ್ಲಿ ಸೇನಾ ಅಧಿಕಾರಿಯಾಗಿದ್ದು, ಶ್ರೀನಗರದಿಂದ ದ್ರಾಸ್ ಸೆಕ್ಟರ್ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಓಟವನ್ನು ಕೈಗೊಂಡಿದ್ದಾರೆ.
ಬರ್ಶಾ ಅವರೊಂದಿಗೆ ಚಿನಾರ್ ವಾರಿಯರ್ಸ್ ಮ್ಯಾರಥಾನ್ ತಂಡವೂ ಓಟದಲ್ಲಿ ಪಾಲ್ಗೊಂಡಿತ್ತು. ಓಟದ ನಂತರ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಬರ್ಶಾ ಅವರು, ‘ಕಾರ್ಗಿಲ್ ಯುದ್ಧ ಪ್ರಾರಂಭವಾದಾಗ ನಾನು 7 ನೇ ತರಗತಿಯಲ್ಲಿದ್ದೆ. 10 ವರ್ಷಗಳ ಹಿಂದೆ ನಿವೃತ್ತರಾದ ನನ್ನ ತಂದೆ ಕರ್ನಲ್ ಕೇಶಬ್ ರೈ ಅವರು ತಮ್ಮ ಸಂಪೂರ್ಣ ಘಟಕದೊಂದಿಗೆ ರಾತ್ರೋರಾತ್ರಿ ಗಡಿಗೆ ತೆರಳಿದ್ದರು. ನಮ್ಮಂತಹ ಸೇನಾ ಕುಟುಂಬಗಳಿಗೆ ಆಗ ಅನಿಶ್ಚಿತತೆ, ಆರ್ಥಿಕ ನಷ್ಟ, ಹತಾಶೆಯ ದಿನಗಳು ಎದುರಾಗಿದ್ದವು. ಈ ಓಟ ನನ್ನ ವೈಯಕ್ತಿಕಕ್ಕಾಗಿ ಅಲ್ಲ. ಕಾರ್ಗಿಲ್ ಯುದ್ಧದ ಸಮಯದಲ್ಲಿ ವೀರಾವೇಶದಿಂದ ಹೋರಾಡಿದ ಸೈನಿಕರ ಅದಮ್ಯ ಚೇತನಕ್ಕೆ ಸಲ್ಲಿಸಿದ ಗೌರವವಾಗಿದೆ’ ಎಂದಿದ್ದಾರೆ.
ಲೆಫ್ಟಿನೆಂಟ್ ಕರ್ನಲ್ ಬರ್ಶಾ ರೈ ಅವರು ಅವರ ಕುಟುಂಬದ ನಾಲ್ಕನೇ ತಲೆಮಾರಿನ ಸೇನಾ ಅಧಿಕಾರಿ. ಬರ್ಶಾ ಅವರ ಮುತ್ತಜ್ಜ ಕೂಡ ಮಿಲಿಟರಿ ಕಾರ್ಯನಿರ್ವಹಿಸಿದ್ದರು ಎಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.