ಭುವನೇಶ್ವರ: ತಾವು ಒಡಿಶಾ ವಿಧಾನಸಭೆಯ ವಿಪಕ್ಷ ನಾಯಕರಾಗುವುದಾಗಿ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಬುಧವಾರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪಟ್ನಾಯಕ್ ಅವರು, ‘ಬಿಜೆಡಿಯ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಾವು ಬಿಜೆಡಿ ಶಾಸಕರ ಸಭೆ ನಡೆಸಿದೆವು. ಆಗ ನಾನು ಶಾಸಕರನ್ನು ಅಭಿನಂದಿಸಿ ಧನ್ಯವಾದ ತಿಳಿಸಿದೆ. ಅವರು ನನ್ನನ್ನು ವಿಪಕ್ಷ ನಾಯಕ ಹಾಗೂ ಬಿಜೆಡಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ’ ಎಂದರು.
ಪ್ರತಿಪಕ್ಷಗಳ ಉಪನಾಯಕರನ್ನಾಗಿ ಹಿರಿಯ ಶಾಸಕ ಪ್ರಸನ್ನ ಆಚಾರ್ಯ, ಸದನದಲ್ಲಿ ವಿಪಕ್ಷದ ಮುಖ್ಯ ಸಚೇತಕರಾಗಿ ಮಾಜಿ ಸಭಾಪತಿ ಪ್ರಮಿಳಾ ಮಲಿಕ್ ಅವರು ನೇಮಕಗೊಂಡಿದ್ದಾರೆ.
ಪಟ್ನಾಯಕ್ ಅವರು ಪ್ರತಾಪ್ ಕೇಶರಿ ದೇಬ್ ಅವರನ್ನು ವಿಪಕ್ಷದ ಉಪ ಮುಖ್ಯ ಸಚೇತಕರನ್ನಾಗಿ ನೇಮಿಸಿದ್ದಾರೆ.
ರಾಜ್ಯದಲ್ಲಿ ಕಳೆದ 24 ವರ್ಷಗಳಿಂದ ಆಡಳಿತ ನಡೆಸಿದ್ದ ಬಿಜೆಡಿಯು ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯಿಂದ ಪರಾಭವಗೊಂಡು ವಿಪಕ್ಷವಾಗಿ ಹೊರಹೊಮ್ಮಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.