ADVERTISEMENT

ಸಿಸೋಡಿಯಾ ಜಾಮೀನು ಅರ್ಜಿ: ಸಿಬಿಐ, ಇ.ಡಿ ಅಭಿಪ್ರಾಯ ಕೇಳಿದ ಸುಪ್ರೀಂ ಕೋರ್ಟ್‌

ಅಬಕಾರಿ ನೀತಿ ಪ್ರಕರಣ; ಸಿಸೋಡಿಯಾ ಜಾಮೀನು ಅರ್ಜಿ

ಪಿಟಿಐ
Published 16 ಜುಲೈ 2024, 13:29 IST
Last Updated 16 ಜುಲೈ 2024, 13:29 IST
ಮನೀಶ್‌ ಸಿಸೋಡಿಯಾ–ಪಿಟಿಐ ಚಿತ್ರ
ಮನೀಶ್‌ ಸಿಸೋಡಿಯಾ–ಪಿಟಿಐ ಚಿತ್ರ   

ನವದೆಹಲಿ: ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಆಮ್‌ ಆದ್ಮಿ ಪಕ್ಷದ (ಎಎಪಿ) ನಾಯಕ ಮನೀಶ್‌ ಸಿಸೋಡಿಯಾ ಜಾಮೀನು ಅರ್ಜಿ ಕುರಿತು ಅಭಿಪ್ರಾಯ ಸಲ್ಲಿಸುವಂತೆ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಸಿಸೋಡಿಯಾ ಅವರು ರಾಜ್ಯದ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ಹಾಗೂ ಅಕ್ರಮ ಹಣ ವರ್ಗಾವಣೆ ನಡೆಸಿದ ಆರೋಪದ ಮೇಲೆ ಕಳೆದ 16 ತಿಂಗಳಿನಿಂದ ಜೈಲಿನಲ್ಲಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ ತಿಂಗಳಿನಿಂದಲೂ ವಿಚಾರಣೆಯು ಅದೇ ಹಂತದಲ್ಲಿದ್ದು, ಜಾಮೀನು ನೀಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು.

ADVERTISEMENT

ಈ ಪ್ರಕರಣದಲ್ಲಿ ಜಾಮೀನು ಅರ್ಜಿಗಳನ್ನು ಮರು ವಿಚಾರಣೆ ನಡೆಸುವಂತೆ ಸಿಸೋಡಿಯಾ ಮಾಡಿದ ಮನವಿಯನ್ನು ಪರಿಗಣಿಸಿದ ನ್ಯಾಯಮೂರ್ತಿ ಬಿ.ಆರ್‌. ಗವಾಯಿ ನೇತೃತ್ವದ ನ್ಯಾಯಪೀಠವು, ಜುಲೈ 29ರ ಒಳಗಾಗಿ ಉತ್ತರ ಸಲ್ಲಿಸುವಂತೆ ಸಿಬಿಐ, ಇಡಿಗೆ ಸೂಚಿಸಿತು.

ಸಿಸೋಡಿಯಾ ಕಳೆದ 16 ತಿಂಗಳಿನಿಂದ ಜೈಲಿನಲ್ಲಿದ್ದು, ಜಾಮೀನು ಅರ್ಜಿ ಪರಿಗಣಿಸಬೇಕು ಎಂದು ಅವರ ಪರ ವಕೀಲ ವಿವೇಕ್‌ ಜೈನ್‌ ಅರ್ಜಿ ಸಲ್ಲಿಸಿದ್ದರು.

2023ರ ಫೆ. 26ರಂದು ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.