ನವದೆಹಲಿ: ಕರ್ತವ್ಯನಿರತರಾಗಿದ್ದಾಗ ಹುತಾತ್ಮರಾದ ಅಗ್ನಿವೀರ್ ಅಜಯ್ ಕುಮಾರ್ ಅವರ ಕುಟುಂಬದವರಿಗೆ ಇನ್ನೂ ಪರಿಹಾರ ನೀಡಿಲ್ಲ ಎಂಬ ಸಾಮಾಜಿಕ ಮಾಧ್ಯಮದ ಪೋಸ್ಟ್ಗಳ ಮಾಹಿತಿ ಸುಳ್ಳು ಎಂದು ಭಾರತೀಯ ಸೇನೆ ಬುಧವಾರ ಸ್ಪಷ್ಟನೆ ನೀಡಿದೆ.
‘ಅಜಯ್ ಕುಮಾರ್ ಅವರ ಕುಟುಂಬದವರಿಗೆ ಈಗಾಗಲೇ ಪರಿಹಾರದ ಮೊತ್ತದಲ್ಲಿ ₹98.39 ಲಕ್ಷವನ್ನು ನೀಡಲಾಗಿದೆ. ಅವರಿಗೆ ಸಂದಾಯವಾಗಲಿರುವ ಒಟ್ಟು ಪರಿಹಾರದ ಮೊತ್ತ ಸುಮಾರು ₹1.65 ಕೋಟಿ’ ಎಂದು ಸೇನಾ ಪಡೆಯ ಸಾರ್ವಜನಿಕ ಮಾಹಿತಿ ವಿಭಾಗದ ಅಡಿಷನಲ್ ಡೈರೆಕ್ಟೊರೇಟ್ ಜನರಲ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಜಯ್ ಕುಮಾರ್ ತಂದೆಯವರದ್ದು ಎನ್ನಲಾದ ವಿಡಿಯೊ ಒಂದು ಹರಿದಾಡಿದ್ದು, ತಮಗೆ ಪರಿಹಾರ ಬಂದಿಲ್ಲ ಎಂಬ ಹೇಳಿಕೆ ಅದರಲ್ಲಿ ಇತ್ತು. ಆ ವಿಡಿಯೊವನ್ನು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹುತಾತ್ಮ ಅಗ್ನಿವೀರರ ವಿಷಯದಲ್ಲಿ ಸಂಸತ್ನಲ್ಲಿ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿ, ಅದಕ್ಕೆ ಕ್ಷಮೆ ಕೇಳಬೇಕು ಎಂದೂ ಪೋಸ್ಟ್ ಮೂಲಕ ಆಗ್ರಹಿಸಿದ್ದರು. ಇದಕ್ಕೆ ಭಾರತೀಯ ಸೇನೆಯು ಪೋಸ್ಟ್ ಮೂಲಕವೇ ಪ್ರತಿಕ್ರಿಯೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.