ಅಂಬಾಲ: ಕಳೆದ ಫೆಬ್ರುವರಿಯಲ್ಲಿ ನಡೆದ ‘ದೆಹಲಿ ಚಲೋ’ ಪ್ರತಿಭಟನೆ ಸಂಬಂಧ ಜೈಲು ಸೇರಿದ್ದ ರೈತ ಹೋರಾಟಗಾರ ನವದೀಪ್ ಸಿಂಗ್ ಮಂಗಳವಾರ ಬಿಡುಗಡೆಯಾಗಿದ್ದಾರೆ.
ಇದಕ್ಕೂ ಮೊದಲು, ನವದೀಪ್ ಅವರ ಬಂಧನ ವಿರೋಧಿಸಿ ರೈತರು ಅಂಬಾಲದ ಎಸ್ಪಿ ಕಚೇರಿಗೆ ಬುಧವಾರ ಹಾಗೂ ಗುರುವಾರ ಮುತ್ತಿಗೆ ಹಾಕಲು ಮುಂದಾಗಿದ್ದರು. ಏತನ್ಮಧ್ಯೆ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ, ರೈತರು ಮುತ್ತಿಗೆ ಯೋಜನೆಯನ್ನು ಹಿಂತೆಗೆದುಕೊಂಡಿರುವುದಾಗಿ ಘೋಷಿಸಿದ್ದಾರೆ.
ಪಂಜಾಬ್–ಹರಿಯಾಣ ಗಡಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ, ಫೆಬ್ರುವರಿ 21ರಂದು ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿತ್ತು. ಬಳಿಕ, ಕೊಲೆ ಯತ್ನ ಹಾಗೂ ಹಿಂಸಾಚಾರ ಆರೋಪದ ಮೇಲೆ ಹರಿಯಾಣ ಪೊಲೀಸರು ಕಳೆದ ಮಾ.28ರಂದು ನವದೀಪ್ ಅವರನ್ನು ಮೊಹಾಲಿಯಲ್ಲಿ ಬಂಧಿಸಿದ್ದರು.
ಹರಿಯಾಣದ ಅಂಬಾಲ ಬಳಿಯ ಜಲ್ಬೇರಾ ಗ್ರಾಮದ ನಿವಾಸಿಯಾದ ನವದೀಪ್, ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿದ್ದ ಕೃಷಿ ಕಾಯ್ದೆಗಳ ವಿರುದ್ಧ 2020ರಲ್ಲಿ ನಡೆದ ರೈತ ಹೋರಾಟದಲ್ಲಿಯೂ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.